
ಅ.2:ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ 25ನೇ ವರ್ಷಕ್ಕೆ ಪಾದಾರ್ಪಣೆ ರಜತ ವರ್ಷಾಚರಣೆಗೆ ಚಾಲನೆ, ರಜತ ವರ್ಷದ ಲಾಂಛನ ಬಿಡುಗಡೆ & ವಿವಿಧ ಕಾರ್ಯಕ್ರಮಗಳಿಗೆ ಚಾಲನೆ

ಜಿಲ್ಲಾ ಮಟ್ಟದ ಪಿಯು ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟ:ಬೈಲೂರುತಂಡ ರಾಜ್ಯಮಟ್ಟಕ್ಕೆ
ಬೈಲೂರುತಂಡ ರಾಜ್ಯಮಟ್ಟಕ್ಕೆ
ಮಿಲಾಗ್ರಿಸ್ ಪದವಿ ಪೂರ್ವ ಕಾಲೇಜ್ ಕಲ್ಯಾಣಪುರ ,ಉಡುಪಿ ಇಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪಿಯು ವಿದ್ಯಾರ್ಥಿಗಳ ವಾಲಿಬಾಲ್ ಪಂದ್ಯಾಟದಲ್ಲಿ ಬೈಲೂರು ನೇತೃತ್ವದ ಬಾಲಕರ ತಂಡ ಸತತ ಎರಡನೇ ಬಾರಿಗೆ ಜಿಲ್ಲಾ ಪ್ರಶಸ್ತಿಯನ್ನು ಗೆದ್ದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ತಂಡದ ಮಣಿಕಂಠ ಇವರಿಗೆ ಅತ್ಯುತ್ತಮ ಅಟಾಕರ್, ಸುಜಿತ್ ಇವರಿಗೆ ಅತ್ಯುತ್ತಮ ಲಿಬ್ರೋ ಗೌರವ ಲಭಿಸಿರುತ್ತದೆ. ತಂಡವನ್ನು ತರಬೇತು ಗೊಳಿಸಿದ ದೈಹಿಕ ಶಿಕ್ಷಣ ಶಿಕ್ಷಕರಾದ ಫೆಡ್ರಿಕ್ ರೆಬೆಲ್ಲೋ, ಕ್ರೀಡಾ ಸಂಚಾಲಕ ಉಪನ್ಯಾಸಕ ರತ್ನಾಕರ ಪೂಜಾರಿ ಹಾಗೂ ಕಾಲೇಜಿನ ಹೆಮ್ಮೆಯ ಪೂರ್ವ ವಿದ್ಯಾರ್ಥಿಗಳಾದ ಮೊಹಮ್ಮದ್ ಶೇಕ್ ಅಮನ್ ಹಾಗೂ ಮಹಮದ್ ಶೇಕ್ ಅಯಾನ್ ಹಾಗೂ ಕಾಲೇಜಿಗೆ ಕೀರ್ತಿ ತಂದಿರುವ ತಂಡದ ಎಲ್ಲಾ ಸದಸ್ಯರುಗಳಿಗೆ ಪ್ರಾಂಶುಪಾಲರು, ಕಾಲೇಜ್ ಅಭಿವೃದ್ಧಿ ಸಮಿತಿ ಹಾಗೂ ಉಪನ್ಯಾಸಕ ಬಳಗ ಅಭಿನಂದನೆಗಳನ್ನು ಸಲ್ಲಿಸಿದೆ.
ಅಂತಾರಾಷ್ಟೀಯ ಟೇಕ್ವಾoಡೋ ಚಾಂಪಿಯನ್ ಶಿಪ್ ಪರಪು ಸತ್ಯಪ್ರಸಾದ್ ರಾವ್ ಪ್ರಥಮಸ್ಥಾನ
ಅಂತಾರಾಷ್ಟೀಯ ಟೇಕ್ವಾoಡೋ ಚಾಂಪಿಯನ್ ಶಿಪ್
ಪರಪು ಸತ್ಯಪ್ರಸಾದ್ ರಾವ್ ಪ್ರಥಮ ಸ್ಥಾನ
ಸೆ.27-28ರಂದು ಗೋವಾದಲ್ಲಿ ನಡೆದ ಅಂತಾರಾಷ್ಟೀಯ ಮಟ್ಟದ ದಕ್ಷಿಣಕೊರಿಯಾದ ರಾಷ್ಟೀಯ ಕ್ರೀಡೆ ಆಗಿರುವ ‘ಟೇಕ್ವಾoಡೋ’ ಸ್ಪರ್ಧೆಯಲ್ಲಿ ಪರಪು ಸತ್ಯಪ್ರಸಾದ್ ರಾವ್ ಪ್ರಥಮ ಸ್ಥಾನ ಗಳಿಸಿದ್ದಾರೆ.ಇವರು ಸುರೇಶ್ ದೇವಾಡಿಗ ಇವರ ಬಳಿ ‘ಟೇಕ್ವಾoಡೋ’ ಅಭ್ಯಾಸ ಮಾಡುತ್ತಿದ್ದಾರೆ.
ಇವರು ಕಾರ್ಕಳದ ಯುವ ಉದ್ಯಮಿ ರಾಜೇಶ್ ರಾವ್ ಪರಪು ಮತ್ತು ಸುನೀತ ರಾವ್ ದಂಪತಿಗಳ ಪುತ್ರ.

ಗಮ್ಮತ್ ಕಲಾವಿದೆರ್ ದುಬೈ ವತಿಯಿಂದ ಸುರಕ್ಷಾ ಸೇವಾಶ್ರಮಕ್ಕೆ ಪಾಕಶಾಲೆಯ ಕೊಡುಗೆ
ಗಮ್ಮತ್ ಕಲಾವಿದೆರ್ ದುಬೈ ವತಿಯಿಂದ ಸುರಕ್ಷಾ ಸೇವಾಶ್ರಮಕ್ಕೆ ಪಾಕಶಾಲೆಯ ಕೊಡುಗೆ
ಗಮ್ಮತ್ ಕಲಾವಿದೆರ್ ದುಬೈ ವತಿಯಿಂದ ಸುರಕ್ಷಾ ಸೇವಾಶ್ರಮಕ್ಕೆ ಸುಸಜ್ಜಿತವಾದ ಪಾಕಶಾಲೆಯನ್ನು ನಿರ್ಮಿಸಿ ಕೊಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕೇಮಾರು ಈಶ ವಿಠಲದಾಸ ಸ್ವಾಮೀಜಿ ದೇವರಿಗೆ ಕೊಟ್ಟ ನೈವೇದ್ಯ ದೇವರಿಗೆ ತಲುಪುತ್ತೋ ಇಲ್ಲವೋ ಗೊತ್ತಿಲ್ಲ,ಆದರೆ ಬಡವರಿಗೆ ಕೊಟ್ಟ ಸಹಾಯ ದೇವರಿಗೆ ತಲುಪುತ್ತದೆ ಎಂದು ಹೇಳಿದರು.
ದೇವರು ಇರುವಾಗ ಯಾರೂ ಅನಾಥರಲ್ಲ,ನಾವು ಬಂದದ್ದು ಒಬ್ಬರೇ ಹೋಗುವುದು ಒಬ್ಬರೇ.ಭೂಮಿಗೆ ಬಂದಿರುವಾಗ ಯಾರು ನಮ್ಮೊಂದಿಗೆ ಇದ್ದಾರೆ ಎನ್ನುವುದು ಮುಖ್ಯವಲ್ಲ ದೇವರೊಂದಿಗೆ ನಾವಿದ್ದೇವೆ ಎಂಬುದು ಮುಖ್ಯ ಎಂದು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಸ್ಥಾಪಕರಾದ ವಿಶ್ವನಾಥ್ ಶೆಟ್ಟಿ ದುಬೈ ಗಮ್ಮತ್ ಕಲಾವಿದೆರ್ UAE ಇದರ ಕುರಿತು ವಿವರಿಸಿದರು.ಅರುಣ್ ಶೆಟ್ಟಿ ಮಂಗಳೂರು, ಸತೀಶ್ ಹೆಗ್ಡೆ ದುಬೈ,ಆಯಿಷಾ ಬಾನು,ಅಮ್ಮನ ನೆರವು ಟ್ರಸ್ಟ್ ನ ಅವಿನಾಶ್ ಜಿ.ಶೆಟ್ಟಿ ಉಪಸ್ಥಿತರಿದ್ದರು.

ಬಡವರ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಿ ಬಡ ಜನರಿಗೆ ಕಾಂಗ್ರೆಸ್ ಸರ್ಕಾರ ದ್ರೋಹ-ನವೀನ್ ನಾಯಕ್
ಬಡವರ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಿ ಬಡ ಜನರಿಗೆ ಕಾಂಗ್ರೆಸ್ ಸರ್ಕಾರ ದ್ರೋಹ
ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿನಿಂದ ಒಂದಲ್ಲ ಒಂದು ರೀತಿಯಲ್ಲಿ ವಿವಾದವನ್ನೇ ಮಾಡಿಕೊಂಡು ಬರುತಿದ್ದು, ಇದೀಗ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡುವ ಮೂಲಕ ಬಡವರ ಹೊಟ್ಟೆಗೆ ಹೊಡೆಯಲು ಹೊರಟಿರುವುದು ವಿಷಾದನೀಯ.
ಸರ್ಕಾರವು ಕಾರ್ಕಳ ಮತ್ತು ಹೆಬ್ರಿ ತಾಲೂಕಿನ 7911 ಪಡಿತರ ಚೀಟಿ ರದ್ದತಿಗೆ ಮುಂದಾಗಿದ್ದು, ಕಾರ್ಕಳ ಭಾರತೀಯ ಜನತಾ ಪಾರ್ಟಿಯು, ಬಡವರಿಗೆ ಅನ್ಯಾಯ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ನಿಲುವನ್ನು ಖಡಾ ಖಂಡಿತವಾಗಿ ಖಂಡಿಸುತ್ತದೆ. ಒಂದು ಕಡೆಯಿಂದ ರಾಜ್ಯದ ಜನತೆಗೆ ಸರಿಯಾಗಿ ಗ್ಯಾರಂಟಿ ಯೋಜನೆಗಳನ್ನು ಕೊಡದೆ ಸತಾಯಿಸುತ್ತಿರುವ ಸರ್ಕಾರ, ಇನ್ನೊಂದು ಕಡೆ ಪಡಿತರ ಚೀಟಿಯನ್ನು ರದ್ದು ಮಾಡುವ ಮೂಲಕ ಜನತೆಗೆ ಬಹುದೊಡ್ಡ ಮೋಸ ಮಾಡಲು ಹೊರಟಿದೆ.
ರಾಜ್ಯದ ಸ್ವತಃ ಮುಖ್ಯಮಂತ್ರಿಗಳೇ ಭ್ರಷ್ಟಾಚಾರದಲ್ಲಿ ತೊಡಗಿದ್ದು ಸಚಿವ ಸಂಪುಟದ ಬಹುತೇಕ ಸಚಿವರುಗಳು ಒಂದಲ್ಲ ಒಂದರಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಪದೇಪದೇ ನಮ್ಮದು ಬಡವರ ಪರ ಸರ್ಕಾರ ಎಂದು ಹೇಳುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರ ಪಾಲಿಗೆ ವರದಾನವಾಗಿದ್ದ ಬಿಪಿಎಲ್ ಕಾರ್ಡ್ ಅನ್ನು ಕ್ಷುಲ್ಲಕ ಕಾರಣಗಳನ್ನು ನೀಡಿ ರದ್ದುಪಡಿಸಲು ಹೊರಟಿರುವುದು ವಿಷಾದನೀಯ.
ಬಿಪಿಎಲ್ ಕಾರ್ಡುದಾರರಿಗೆ ಅನ್ನಭಾಗ್ಯವಲ್ಲದೆ ಇತರ ಅನೇಕ ಸರ್ಕಾರದ ಸವಲತ್ತುಗಳಿಗೆ ಬಿಪಿಎಲ್ ಕಾರ್ಡೇ ಮಾನದಂಡವಾಗಿದ್ದು, ಇದರ ಆಧಾರದಲ್ಲಿ ರಾಜ್ಯದಲ್ಲಿ ಲಕ್ಷಾಂತರ ಬಡ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇನ್ನು ಮುಂದೆ ಪಡಿತರ ಚೀಟಿ ರದ್ದಾದಲ್ಲಿ ಬಡ ಮಕ್ಕಳು ಗುಣಮಟ್ಟದ ವಿದ್ಯಾಭ್ಯಾಸದಿಂದ ವಂಚಿತರಾಗಲಿದ್ದಾರೆ. ಅದರಲ್ಲೂ ಮುಖ್ಯವಾಗಿ ಕೇಂದ್ರ ಸರ್ಕಾರದ ಆಯುಷ್ಮಾನ್ ಆರೋಗ್ಯ ಯೋಜನೆಯ ಮೂಲಕ ಬಡವರಿಗೆ ಹೃದಯ ಸಂಬಂಧಿ ಹಾಗೂ ಇನ್ನಿತರ ಗಂಭೀರ ಖಾಯಿಲೆಗಳು ಬಂದಾಗ ಈ ಯೋಜನೆಯಿಂದ ಬಹಳಷ್ಟು ಅನುಕೂಲವಾಗುತ್ತಿದೆ.
ಈ ಯೋಜನೆಯ ಅನುಕೂಲವನ್ನು ಪ್ರಸ್ತುತ ಲಕ್ಷಾಂತರ ಬಡ ಜನರು ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಲಕ್ಷಾಂತರ ರೂಪಾಯಿ ತೆತ್ತು ಚಿಕಿತ್ಸೆ ಪಡೆಯುವುದೇ ಕಷ್ಟಕರ. ಇಂತಹ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಪಡಿತರ ಚೀಟಿ ರದ್ದು ಮಾಡಲು ಹೊರಟಿರುವುದು, ಹೇಳುವುದೊಂದು, ಮಾಡುವುದು ಇನ್ನೊಂದು ಎಂಬ ಗಾದೆಯಂತಿದೆ. ಸರ್ಕಾರದ ಈ ನಿಲುವಿನಿಂದ ರಾಜ್ಯದಲ್ಲಿ 25 ಲಕ್ಷಕ್ಕೂ ಅಧಿಕ ಬಡವರು ಇಂತಹ ಜನಪರ ಯೋಜನೆಯಿಂದ ವಂಚಿತರಾಗಲಿದ್ದಾರೆ. ಸರ್ಕಾರದಿಂದ ಬಡವರಿಗೆ ಮಾಡುತ್ತಿರುವ ಘೋರ ಅನ್ಯಾಯವಾಗಿದೆ.
ಸರ್ಕಾರ ಪಡಿತರ ಚೀಟಿ ರದ್ದು ಮಾಡಲು ಮುಂದಾಗಿರುವ ನಿರ್ಧಾರವನ್ನು ಈ ಕೂಡಲೇ ಹಿಂಪಡೆಯಬೇಕು ಎಂದು ಕಾರ್ಕಳ ಭಾರತೀಯ ಜನತಾ ಪಾರ್ಟಿಯ ಕ್ಷೇತ್ರ ಅಧ್ಯಕ್ಷರಾದ ನವೀನ್ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಯ ಪರಂಪರಾನುಗತ ಅಧಿಕಾರ ದಾಹದ ಷಢ್ಯಂತ್ರಕ್ಕೆ ಮೂಡ ಪ್ರಕರಣ ಸಾಕ್ಷಿ-ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ
ಬಿಜೆಪಿಯ ಪರಂಪರಾನುಗತ ಅಧಿಕಾರ ದಾಹದ ಷಢ್ಯಂತ್ರಕ್ಕೆ ಮೂಡ ಪ್ರಕರಣ ಸಾಕ್ಷಿ-ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ
ಸಾಮಾಜಿಕ ನ್ಯಾಯದ ಹರಿಕಾರ ಸಿದ್ಧರಾಮಯ್ಯನವರ ತೇಜೋವಧೆ ಮಾಡಿ ರಾಜ್ಯದ ಕಾಂಗ್ರೆಸ್ ಪಕ್ಷದ ಸರಕಾರವನ್ನು ಅತಂತ್ರಗೊಳಿಸುವ ಬಿಜೆಪಿಯ ಪರಂಪರಾನುಗತ ಅಧಿಕಾರ ದಾಹದ ಷಢ್ಯಂತ್ರಕ್ಕೆ ಮೂಡ ಪ್ರಕರಣ ಸಾಕ್ಷಿಯಾಗಿದೆ. ತನಿಖೆಯಿಂದ ಸತ್ಯ ಹೊರಬರಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮೂಡಾ ಪ್ರಕರಣವನ್ನು ಬಳಸಿಕೊಂಡು ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಇಳಿಸಿ ಕಾಂಗ್ರೆಸ್ ಪಕ್ಷದಲ್ಲಿ ಆಂತರೀಕ ಗೊಂದಲ ಸೃಷ್ಢಿಸಿ ಅಧಿಕಾರಕ್ಕೆ ಬರುವ ರಾಜ್ಯ ಬಿಜೆಪಿಯ ವ್ಯರ್ಥ ಹುನ್ನಾರದ ಹಿಂದೆ ಕೇಂದ್ರದ ವ್ಯವಸ್ಥಿತ ಕೈವಾಡವಿದೆ. ಇದಕ್ಕೆ ಹರ್ಯಾಣದ ಸೋನಿಪತ್ ನಲ್ಲಿ ಪ್ರಧಾನಿ ಮೋದಿ ರಾಜ್ಯದ ಮೂಡ ಪ್ರಕರಣವನ್ನು ಉಲ್ಲೇಖಿಸಿ ಮಾಡಿದ ಚುನಾವಣಾ ಪ್ರಚಾರ ಭಾಷಣವನ್ನು ಒಂದು ಉದಾಹರಣೆಯಾಗಿದೆ. ಅಪರಾದ ಸಾಬೀತಾಗದೆ ಕಾಂಗ್ರೆಸ್ ಪಕ್ಷವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಮಾತನಾಡಿರುವುದು ಎಷ್ಟು ಸರಿ ಎನ್ನುವುದು ಉಲ್ಲೇಖನೀಯ ಎಂದು ಹೇಳಿದ್ದಾರೆ.
ಕಳೆದ ತನ್ನ 10 ವರ್ಷಗಳ ಆಡಳಿತಾವಧಿಯಲ್ಲಿ ಕರ್ನಾಟಕವೂ ಸೇರಿ ವಿವಿಧ ರಾಜ್ಯಗಳ 10ಕ್ಕೂ ಹೆಚ್ಚು ವಿರೋಧ ಪಕ್ಷಗಳ ಚುನಾಯಿತ ಸರಕಾರಗಳನ್ನು ಬೀಳಿಸಿದ, ರಾಷ್ಟ್ರೀಯ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿ 400ಕ್ಕೂ ಅಧಿಕ ಕಾಂಗ್ರೆಸ್ ಹಾಗೂ ಅನ್ಯಪಕ್ಷಗಳ ಶಾಸಕರನ್ನು ತನ್ನ ಪಕ್ಷಕ್ಕೆ ಪಕ್ಷಾಂತರಿಸಿದ, ರಾಷ್ಟ್ರೀಯ ತನಿಖಾ ಸಂಸ್ಥೆಗಳಿಂದ ಭ್ರಷ್ಠಾಚಾರಿಗಳೆಂದು ಪ್ರಕರಣ ದಾಖಲಿಸಿಕೊಂಡವರಿಗೆ ಅಧಿಕಾರದ ಹುದ್ಧೆಕೊಟ್ಟು ಸಂವಿಧಾನದ ಮೌಲ್ಯಗಳನ್ನು ಉಲ್ಲಂಘಿಸಿದವರಿಗೆ ಅದು ದೇಶದ ಪ್ರಧಾನಿಗಾಗಲಿ, ಬಿಜೆಪಿಯ ಯಾವುದೇ ನಾಯಕನಿಗಾಗಲಿ ಮೂಡಾ ಪ್ರಕರಣದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ. ಸಿದ್ಧರಾಮಯ್ಯನವರ ಮೇಲಿನ ಅಪವಾಧ ವಾಸ್ತವತೆ ತನಿಖೆಯಿಂದ ಹೊರಬರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉದ್ಯಮಿ ವಿನಾಯಕ್ ನಾಯ್ಕ ಹತ್ಯೆ ಪ್ರಕರಣ:ಪ್ರಮುಖ ಆರೋಪಿ ಗೋವಾದಲ್ಲಿಆತ್ಮಹತ್ಯೆ
ಕಾರವಾರದ ಹಣಕೋಣ ಉದ್ಯಮಿ ವಿನಾಯಕ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಗೋವಾದಲ್ಲಿಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬದಲ್ಲಿನ ದ್ವೇಷಕ್ಕೆ ಎರಡು ಜೀವಗಳು ಬಲಿಯಾಗಿವೆ.
ಉತ್ತರ ಕನ್ನಡಜಿಲ್ಲೆಯ ಕಾರವಾರದ ಹಣಕೋಣದಲ್ಲಿ ಪುಣೆಯ ಉದ್ಯಮಿಯ ಭೀಕರ ಕೊಲೆ ನಡೆದ ಮೂರು ದಿನದಲ್ಲಿ ಖಾಕಿ ಪಡೆ ಆರೋಪಿಗಳ ಬೇಟೆಯಾಡಿದೆ. ಬಿಹಾರದ ಮೆಹೆಂದರ್ ಪುರ್ನ ಅಜ್ಮಲ್ ಜಾಬಿರ್ ,ಮಾಸುಮ್ ಮಂಜೂರ್ ,ಅಸ್ಸಾಂನ ಬರುವದಾಲ್ನಿ ಲಕ್ಷ್ ಜ್ಯೋತಿನಾಥ್ ಆರೋಪಿಗಳಾದರೆ ಪ್ರಮುಖ ಆರೋಪಿ ಉದ್ಯಮಿ ಗುರುಪ್ರಸಾದ್ ರಾಣೆ ಗೋವಾದಲ್ಲಿ ಮಾಂಡವಿ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರಿ ಎಂ.ನಾರಾಯಣ್ ಮಾಹಿತಿ ನೀಡಿದ್ದಾರೆ.
ಘಟನೆ ಏನು?
ಪುಣೆಯ ಉದ್ಯಮಿ ವಿನಾಯಕ ನಾಯ್ಕ ಹಾಗೂ ಗೋವಾದ ಉದ್ಯಮಿ ಗುರುಪ್ರಸಾದ್ ರಾಣೆ ಮೂಲತಃ ಕಾರವಾರದವರಾಗಿದ್ದು ಇಬ್ಬರೂ ಸಂಬಂಧಿಕರಾಗಿದ್ದರು. ಆದರೇ ಕೌಟುಂಬಿಕ ಕಲಹ ಇಬ್ಬರ ದಾಂಪತ್ಯ ಕೆಡುವಂತೆ ಮಾಡಿತ್ತು. ಇದಲ್ಲದೇ ವಿನಾಯಕ್ ನಾಯ್ಕ ಪತ್ನಿ ವೃಷಾಲಿಗೆ ವಿಚ್ಛೇದನ ನೀಡುವ ಹಂತಕ್ಕೆ ಹೋಗಿದ್ದು ಹಿರಿಯರ ಮಧ್ಯಸ್ಥಿಕೆಯಲ್ಲಿ ಸರಿಯಾಗಿತ್ತು.
ಆದರೆ ಈ ಕೌಟುಂಬಿಕ ಜಗಳ ಗೋವಾ ಉದ್ಯಮಿ ಗುರುಪ್ರಸಾದ್ ರಾಣೆಯ ಬದುಕನ್ನು ಹಾಳುಗೆಡಿಸಿತ್ತು. ಹೀಗಾಗಿ ಕಳೆದ ಆರು ತಿಂಗಳಿಂದ ತನ್ನ ಬಂಟರ ಮೂಲಕ ಹತ್ಯೆಗೆ ಸಂಚು ರೂಪಿಸಿದ್ದು, ತಾಯಿಯ ಶ್ರಾದ್ಧ ಹಾಗೂ ಊರಿನ ದೇವರ ಉತ್ಸವಕ್ಕೆ ಆಗಮಿಸಿದ್ದ ವಿನಾಯಕ್ ನಾಯ್ಕ ಮರಳಿ ಪುಣೆಗೆತೆರಳಲು ಸಿದ್ದರಾಗಿದ್ದಾಗ ಸೆ.22 ಭಾನುವಾರ ಮುಂಜಾನೆ ಸ್ವಿಫ್ಟ್ ಕಾರಿನ ಮೂಲಕ ಬಂದ ಮೂರು ಜನ ಮುಸುಕುದಾರಿಗಳು ಮನೆಗೆ ನುಗ್ಗಿ ಮಚ್ಚು ಮತ್ತು ರಾಡ್ನಿಂದ ವಿನಾಯಕ್ ನಾಯ್ಕ ಹತ್ಯೆ ಮಾಡಿದರು. ತಡೆಯಲು ಬಂದ ಆತನ ಪತ್ನಿ ವೃಷಾಲಿಗೆ ತಲೆಗೆ ರಾಡ್ನಿಂದ ಹೊಡೆದು ಹಲ್ಲೆ ಮಾಡಿ ಪರಾರಿಯಾಗಿದ್ದರು.
ಇದೀಗ ಮುಖ್ಯ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಕೌಟುಂಬಿಕ ಕಲಹ ಇರುವುದರಿಂದ ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ ಎಂದು ಎಸ್ಪಿ ಎಂ.ನಾರಾಯಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಾರ್ಕಳ:ಕ್ರೈಸ್ಟ್ ಕಿಂಗ್ ನಲ್ಲಿ ರಾಷ್ಟ್ರೀಯ ಹಿಂದಿ ದಿನಾಚರಣೆ
ಕಾರ್ಕಳ:ಕ್ರೈಸ್ಟ್ ಕಿಂಗ್ ನಲ್ಲಿ ರಾಷ್ಟ್ರೀಯ ಹಿಂದಿ ದಿನಾಚರಣೆ
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯಡ್ಕ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿಂದಿ ಶಿಕ್ಷಕ ಡಾ. ರವೀಂದ್ರ ಕುಮಾರ್ ಅವರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ಈ ದೇಶದಲ್ಲಿ ಎಲ್ಲಾ ಭಾಷೆಗಳು ಶ್ರೇಷ್ಟವೇ, ಆದ್ದರಿಂದ ಭಾಷೆಗಳನ್ನು ದ್ವೇಷಿಸದೆ ಪ್ರೀತಿಸಬೇಕು. ಹಿಂದಿ ದೇಶದ ಪ್ರಮುಖ ಭಾಷೆಯಾದ ಕಾರಣ ಅದರ ಕಲಿಕೆಯ ಕಡೆಗೂ ಒತ್ತನ್ನು ನೀಡಬೇಕು” ಎಂದು ಹೇಳಿ ಹಿಂದಿ ಭಾಷೆ ಹುಟ್ಟಿ ಬೆಳೆದು ಬಂದ ರೀತಿ, ಹಿಂದಿಯ ಪ್ರಾಮುಖ್ಯತೆ, ಜೀವನದಲ್ಲಿ ಹಿಂದಿ ಭಾಷೆ ಅಳವಡಿಕೆಯ ಅಗತ್ಯತೆಗಳ ಕುರಿತು ತಿಳಿ ಹೇಳಿದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಹಿಂದಿ ಉಪನ್ಯಾಸಕಿ ಶ್ರೀಮತಿ ಶಾಹಿನಾ ಬಾನು ಅತಿಥಿಗಳನ್ನು ಪರಿಚಯಿಸಿದರೆ ಹಿಂದಿ ಶಿಕ್ಷಕಿ ಶಮೀನಾ ಅಮೀರ್ ಸ್ವಾಗತಿಸಿದರು. ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಲೆನಿಷಾ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿ, ಝುಬೇದ ವಂದಿಸಿದರು.
ನಿಟ್ಟೆ:ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ-ಧಾರ್ಮಿಕ ಸಭಾ ಕಾರ್ಯಕ್ರಮ
ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ(ರಿ.) ನಿಟ್ಟೆ, ಇದರ ವತಿಯಿಂದ ಸಮಾಜ ಕಲ್ಯಾಣಾರ್ಥವಾಗಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವವು ಶ್ರೀ ಕಾಳಿಕಾಂಬಾ ಮಹಿಳಾ ಸೇವಾ ಸಮಿತಿ ಹಾಗೂ ವಿಶ್ವಕರ್ಮ ಯುವವೇದಿಕೆ ನಿಟ್ಟೆ ಇವರ ಸಹಭಾಗಿತ್ವದಲ್ಲಿ ನಿಟ್ಟೆ ಪ್ರಾಥಮಿಕ ಶಾಲೆಯ ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಸಭಾಭವನದಲ್ಲಿ, ಬೋಳಾ ಮಂಜುನಾಥ ಪುರೋಹಿತರ ಪೌರೋಹಿತ್ಯದಲ್ಲಿ, ಸಮಾರಂಭದ ಮುಖ್ಯ ಅತಿಥಿಗಳಾದ ಉಡುಪಿ ಹಾಗೂ ದ.ಕ ಜಿಲ್ಲೆಗಳ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಮಧು ಆಚಾರ್ಯ ಮುಲ್ಕಿ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಮಂಗಳೂರು ವಿಭಾಗದ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಆಶಾ ಉಮೇಶ್ ಗುರೂಜಿ ಉಪಸ್ಥಿತಿಯಲ್ಲಿ, ಸಮಿತಿಯ ಅಧ್ಯಕ್ಷರಾದ ಹರ್ಷವರ್ಧನ್ ಆಚಾರ್ಯ ನಿಟ್ಟೆ ಇವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನೆರವೇರಿತು. ಸಮಾರಂಭದಲ್ಲಿ ಖ್ಯಾತ ವಾಗ್ಮಿ, ಸಾಮಾಜಿಕ ಚಿಂತಕರು, ಬಹುಬೇಡಿಕೆಯ ನಿರೂಪಕರಾದ ಎನ್. ಆರ್. ದಾಮೋದರ ಶರ್ಮಾ ಬಾರ್ಕೂರು ಹಾಗೂ ನಿಟ್ಟೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಯಾಗಿರುವ ಶ್ರೀಮತಿ ಪಿ. ಎನ್. ಶೋಭಾ ಆಚಾರ್ಯ ಇವರಿಗೆ “ಪ್ರೇರಣಾ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಮಿತಿಯ ವತಿಯಿಂದ 58 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ನಿಟ್ಟೆ ವಿಶ್ವಕರ್ಮ ಸಂಘದ ಜೊತೆ ಸಮಾಜ ಸೇವೆಯಲ್ಲಿ ಕೈ ಜೋಡಿಸಿರುವ ಕೆಮ್ಮಣ್ಣು ತೆಂಕುಮನೆ ಶ್ರೀಮತಿ ರತ್ನಾವತಿ ಮತ್ತು ಶ್ರೀ ಮೋನಯ್ಯ ಆಚಾರ್ಯ ಇವರ ಸ್ಮರಣಾರ್ಥ ಇವರ ಮೊಮ್ಮಕ್ಕಳಿಂದ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ “ವಿದ್ಯಾ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪಾಲ್ಕೆ ಬಾಬುರಾಯ ಆಚಾರ್ಯ, ಅಣ್ಣಯ್ಯ ಆಚಾರ್ಯ, ಹರೀಶ್ಚಂದ್ರ ಮಾಸ್ಟ್ರ ಸದ್ವಿಚಾರಗಳನ್ನು ಉಲ್ಲೇಖ ಮಾಡಿ ದಾಮೊದರ ಶರ್ಮಾರು ನೀಡಿದ ಅದ್ಭುತ ಉಪನ್ಯಾಸ ನೆರೆದಿದ್ದ ಜನ ಸಮೂಹವನ್ನು ಮಂತ್ರ ಮುಗ್ದಗೊಳಿಸಿತು. ವಿಶ್ವಕರ್ಮ ಒಕ್ಕೂಟದ ಅಧ್ಯಕ್ಶರಾದ ಮಧು ಆಚಾರ್ಯರು ಮಾತನಾಡಿ ನಿಟ್ಟೆ ಸಮಿತಿಯವರು ವಿಶ್ವಕರ್ಮ ಪೂಜೆಯನ್ನು ಕೇವಲ ವಿಶ್ವಕರ್ಮರಿಗೆ ಸೀಮಿತವಾಗಿರಿಸದೆ, ಸಾರ್ವಜನಿಕರನ್ನು ಒಗ್ಗೂಡಿಸಿ ವಿಶ್ವಕರ್ಮ ಪೂಜೆಯನ್ನು ಮಾಡಿ ತೋರಿಸಿದ್ದಾರೆ, ಇದು ನಮ್ಮ ಎಲ್ಲರಿಗೂ ಮಾದರಿಯಾಗಿದೆ, ಎಲ್ಲದರಲ್ಲೂ ಹೊಸ ತನವನ್ನು ತರುವಲ್ಲಿ ಮುಂಚೂಣಿಯಲ್ಲಿರುವ ಸಂಘ ಎಂದರೆ ನಿಟ್ಟೆ ಸಂಘ ಎಂದು ನಿಟ್ಟೆ ಸಂಘದ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಇದೇ ರೀತಿ ನಾವೆಲ್ಲರೂ ಒಗ್ಗಟ್ಟಾಗಿದ್ದು ಸನಾತನ ಧರ್ಮವನ್ನು ಉಳಿಸಬೇಕು ಹಿಂದೂ ಧರ್ಮವನ್ನು ಬೆಳೆ ಬೇಕು ಎಂದರು. ಸಮಿತಿಯ ಅಧ್ಯಕ್ಷರಾದ ಶ್ರೀ ಹರ್ಷವರ್ಧನ್ ಆಚಾರ್ಯ,ನಿಟ್ಟೆ ಮಾತನಾಡಿ ಸಮಿತಿಯ ಯಶಸ್ಸು ಒಬ್ಬ ಅಧ್ಯಕ್ಷ ಅಥವಾ ಕಾರ್ಯದರ್ಶಿಯ ಶ್ರಮದ ಫಲ ಮಾತ್ರ ಆಗಲು ಸಾಧ್ಯವಿಲ್ಲ, ಇದು ಎಲ್ಲಾ ಸದಸ್ಯರ ಶ್ರಮದ ಫಲ, ಸಮಾಜ ಸೇವೆಯೇ ನಿಟ್ಟೆ ವಿಶ್ವಕರ್ಮ ಸಂಘದ ಮುಖ್ಯ ಉದ್ದೇಶ, ಸಮಾಜ ಸೇವೆಯ ಸ್ಪಷ್ಟ ಗುರಿಯಿದೆ, ಬಡವ ಶ್ರೀಮಂತನೆಂಬ ಬೇಧವಿಲ್ಲ ಇಲ್ಲಿ ಸಮಾನತೆಯ ತತ್ವವಿದೆ, ಸಂಘದ ವ್ಯವಹಾರಗಳಲ್ಲಿ ನೂರು ಶೇಕಡಾ ಪಾರದರ್ಶಕತೆ ಇದೆ, ಮಿತ್ರ ಸಮುದಯಗಳೊಂದಿಗೆ ಸೌಹರ್ದತೆಯ ನಂಟಿದೆ ಇದೇ ನಮ್ಮ ಸಂಘದ ಶಕ್ತಿ, ಈ ಎಲ್ಲಾ ಕಾರಣಕ್ಕೆ ನಿಟ್ಟೆ ವಿಶ್ವಕರ್ಮ ಸಂಘ ಯಶಸ್ಸಿನ ಹಾದಿಯಲ್ಲಿದೆ ಎಂದರು.
ವಿಶ್ವಕರ್ಮ ಒಕ್ಕೂಟದ ಕೋಶಾಧಿಕಾರಿ ಜನಾರ್ಧನ ಎಸ್. ಆಚಾರ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಸತೀಶ್ ಆಚಾರ್ಯ, ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರುಗಳಾದ ಶ್ರೀ ರಾಮಚಂದ್ರ ಆಚಾರ್ಯ, ಶ್ರೀ ರವಿ ಆಚಾರ್ಯ, ಶ್ರಿ ಸುರೇಶ್ ಆಚಾರ್ಯ ನಿಟ್ಟೆ, ಶ್ರೀ ಹರೀಶ್ ಆಚಾರ್ಯ ನೆಲ್ಲಿಕಾರು, ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ವಿಶ್ವನಾಥ ಆಚಾರ್ಯ ನಿಟ್ಟೆ, ಉಪಾಧ್ಯಕ್ಷರಾದ ಶ್ರೀ ಈಶ್ವರ್ ಬಡಿಗೇರ, ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವತ್ಸಲಾ ಉಮೇಶ ಆಚಾರ್ಯ, ಗೌರವಾಧ್ಯಕ್ಷರಾದ ಶ್ರೀಮತಿ ವೀಣಾ ದಿವಾಕರ ಆಚಾರ್ಯ, ಉಪಾಧ್ಯಕ್ಷರಾದ ಶ್ರೀಮತಿ ಉದಯ ಸುಧಾಕರ ಆಚಾರ್ಯ, ಹಾಗೂ ಕಾರ್ಯದರ್ಶಿ ಆಶಾ ಜಯಾನಂದ ಆಚಾರ್ಯ, ವಿಶ್ವಕರ್ಮ ಯುವವೇದಿಕೆಯ ಅಧ್ಯಕ್ಷರಾದ ಶ್ರೀ ಪ್ರದೀಪ್ ಆಚಾರ್ಯ ಪರಪ್ಪಾಡಿ, ಉಪಾಧ್ಯಕ್ಷರಾದ ಸುಧೀರ್ ಆಚಾರ್ಯ ಕಲ್ಯಾ ಹಾಗೂ ವಿವಿಧ ವಿಶ್ವಕರ್ಮ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿಯ ಕೋಶಾಧಿಕಾರಿ ಶ್ರೀ ಜಯಾನಂದ ಸ್ವಾಗತಿಸಿದರು, ಕಾರ್ಯದರ್ಶಿ ಶ್ರೀಧರ ಆಚಾರ್ಯ ಕೆಮ್ಮಣ್ಣು ವಾರ್ಷಿಕ ವರದಿಯನ್ನು ವಾಚಿಸಿದರು. ಪ್ರಸಾದ್ ಆಚಾರ್ಯ, ಕುಮಾರಿ ಶ್ರೇಯಾ, ಸೃಜಾ ಕಾರ್ಯಕ್ರಮ ನಿರೂಪಿಸಿದರು. ಶ್ರೀ ದಿವಾಕರ ಆಚಾರ್ಯ ಕೆಮ್ಮಣ್ಣು ವಂದಿಸಿದರು. ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ಬಳಿಕ ನಿಟ್ಟೆ ಸಮಿತಿಯ ಯುವ ಕಲಾವಿದ ಪ್ರದೀಪ್ ಆಚಾರ್ಯ ಕೆಮ್ಮಣ್ಣು ಇವರ ಮೆಲೋಡಿ ಮ್ಯೂಸಿಕಲ್ ತಂಡ ಹಾಗೂ ಸಮಾಜ ಬಾಂಧವರಿಂದ ವಿವಿಧ ಮನೋರಂಜನೆಯ ಕಾರ್ಯಕ್ರಮಗಳೊಂದಿಗೆ ಸಂಜೆ 7 ಗಂಟೆಗೆ ಸಮಾರಂಭ ಸಂಪನ್ನಗೊಂಡಿತು.

ಕಾರ್ಕಳ:ಬಾಲ್ ಬ್ಯಾಡ್ಮಿಂಟನ್-ಎಸ್ ವಿ ಟಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಭಾರತಿ, ಜ್ಯೋತಿ, ಭೂಮಿಕಾ ವಿಭಾಗ ಮಟ್ಟಕ್ಕೆ ಆಯ್ಕೆ
ಕಾರ್ಕಳ:ಬಾಲ್ ಬ್ಯಾಡ್ಮಿಂಟನ್-ಎಸ್ ವಿ ಟಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಭಾರತಿ, ಜ್ಯೋತಿ, ಭೂಮಿಕಾ ವಿಭಾಗ ಮಟ್ಟಕ್ಕೆ ಆಯ್ಕೆ
ಶಾಲಾ ಶಿಕ್ಷಣ ಇಲಾಖೆ ಹಾಗೂ ವಿದ್ಯೇಶ ವಿದ್ಯಾಮಾನ್ಯ ನ್ಯಾಷನಲ್ ಹೈಸ್ಕೂಲ್ ಹೆರಾಡಿ ಇಲ್ಲಿ ನಡೆದ ಜಿಲ್ಲಾಮಟ್ಟದ ಪ್ರೌಢಶಾಲಾಬಾಲಕ – ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕಾರ್ಕಳದ ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜಿನ ಕನ್ನಡ ಮಾಧ್ಯಮದ ಪ್ರೌಢಶಾಲೆಯ ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿರುತ್ತಾರೆ.
ಈ ತಂಡದ ಬೆಸ್ಟ್ ಪ್ಲೇಯರ್ ಹತ್ತನೇ ತರಗತಿಯ ಭಾರತಿ, ಜ್ಯೋತಿ ಭೂಮಿಕಾ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಕ್ರೀಡಾಪಟುಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಿಯಾ ಪ್ರಭು ಹಾಗೂ ಕೋಚ್ ಕೀರ್ತನ್, ಶ್ರವಣ್ ,ಕುಮಾರಿ ಶ್ವೇತಾ ತರಬೇತಿ ನೀಡಿರುತ್ತಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಿರಿಯ ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.






