ರಾಜ್ಯದಲ್ಲಿ ಹೊಸದಾಗಿ ಸ್ಥಾಪಿಸಿದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮಕ್ಕೆ ವಿಶೇಷವಾಗಿ ಅನುದಾನ ನೀಡುವಂತೆ ಶುಕ್ರವಾರ ನಿಗಮದ ಅಧ್ಯಕ್ಷರಾದ ಮುದ್ರಾಡಿ ಮಂಜುನಾಥ ಪೂಜಾರಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರಿಗೆ ಮನವಿ ಸಲ್ಲಿಸಿದ್ದಾರೆ. ಈಗಾಗಲೇ ಅಭಿವೃದ್ಧಿ ನಿಗಮಕ್ಕೆ ರೂ 10 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಪ್ರತಿ ವರ್ಷ 100 ಕೋಟಿ ರೂಪಾಯಿ ನೀಡುವುದಾಗಿ ಮುಖ್ಯ ಮಂತ್ರಿಗಳು ತಿಳಿಸಿದ್ದರು.
ಅದರಂತೆ ವಿಶೇಷ ಅನುದಾನ ನೀಡುವಂತೆ ಮುಖ್ಯ ಮಂತ್ರಿಗಳಲ್ಲಿ ಮಂಜುನಾಥ ಪೂಜಾರಿ ಪ್ರಸ್ತಾಪಿಸಿ ಮನವಿ ಮಾಡಿದ್ದಾರೆ. ಶೀಘ್ರದಲ್ಲಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿಯವರು ತಿಳಿಸಿದ್ದಾರೆ ಎಂದು ಮಂಜುನಾಥ ಪೂಜಾರಿ ಹೇಳಿದರು.
ಈಗಾಗಲೇ ಮಂಜೂರು ಗೊಂಡಿರುವ 10 ಕೋಟಿ ರೂಪಾಯಿಯಲ್ಲಿ 4 ಕೋಟಿ ಅರಿವು ಕಾರ್ಯಕ್ರಮಕ್ಕೆ, 2.5 ಕೋಟಿ ರೂಪಾಯಿ ಗಂಗಾ ಕಲ್ಯಾಣ ಯೋಜನೆಗೆ, 1.5 ಕೋಟಿ ರೂಪಾಯಿಯನ್ನು ಸಮುದಾಯದಲ್ಲಿ ಮುರ್ತೆದಾರಿಕೆಯಲ್ಲಿ ತೊಡಗಿಕೊಂಡವರಿಗಾಗಿ ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗೆ ಪೈಲೇಟ್ ಪ್ರಾಜೆಕ್ಟ್ ಮೂಲಕ ಮಹಿಳೆಯರಿಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಸಾಲ ಯೋಜನೆ ನೀಡಲಾಗಿದೆ ಎಂದು ಮುದ್ರಾಡಿ ಮಂಜುನಾಥ ಪೂಜಾರಿ ತಿಳಿಸಿದ್ದಾರೆ.






























