Tuesday, August 25, 2026
Google search engine
Homeಕಾರ್ಕಳಮಲ್ಲಿಕಾರ್ಜುನ ಖರ್ಗೆ ರ‍್ಯಾಲಿ ನಡೆಸಿದ ಸ್ಥಳ ‘ಶುದ್ಧೀಕರಣ’ ದಲಿತ ವಿರೋಧಿ ಮನಸ್ಥಿತಿಯ ಪ್ರತೀಕ: ಕಾರ್ಕಳ ಕಾಂಗ್ರೆಸ್...

ಮಲ್ಲಿಕಾರ್ಜುನ ಖರ್ಗೆ ರ‍್ಯಾಲಿ ನಡೆಸಿದ ಸ್ಥಳ ‘ಶುದ್ಧೀಕರಣ’ ದಲಿತ ವಿರೋಧಿ ಮನಸ್ಥಿತಿಯ ಪ್ರತೀಕ: ಕಾರ್ಕಳ ಕಾಂಗ್ರೆಸ್ ಆಕ್ರೋಶ

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಬಳಿಕ, ಅದೇ ಸ್ಥಳದಲ್ಲಿ ಬಿಜೆಪಿ ಪರವಾದ ಸಂಘಟನೆಗಳಿಂದ ಪೂಜೆ ಹಾಗೂ ಹವನ ನಡೆಸಿ ‘ಶುದ್ಧೀಕರಣ’ ಮಾಡಿರುವ ಘಟನೆ ತೀವ್ರ ಖಂಡನೀಯವಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದರು ಎನ್ನುವ ಏಕೈಕ ಕಾರಣಕ್ಕೆ ಬಿಜೆಪಿ ಪರ ಸಂಘಟನೆಗಳು ಸ್ಥಳವನ್ನು ‘ಶುದ್ಧೀಕರಣ’ ಮಾಡಿರುವುದು ಅಸ್ಪ್ರಶ್ಯತೆಯನ್ನು ಪೋಷಿಸುವಂತಿದೆ. ಜಾತಿ ಆಧಾರಿತ ಅಸ್ಪೃಶ್ಯತೆ ಮತ್ತು ತಾರತಮ್ಯವನ್ನು ಸಂವಿಧಾನವೇ ತಿರಸ್ಕರಿಸಿರುವ ಸಂದರ್ಭದಲ್ಲಿ ಇಂತಹ ಆಚರಣೆಗಳು ಅಮಾನವೀಯವಾಗಿದೆ. ಭಾರತವು 80 ನೇ ಸ್ವಾತಂತ್ರ್ಯದ ಹೊಸ್ತಿಲಲ್ಲಿದ್ದರು ಡಾ. ಬಿ.ಆರ್. ಅಂಬೇಡ್ಕರ್ ಅನುಭವಿಸಿದ ನೋವುಗಳನ್ನು ದಲಿತ ಸಮುದಾಯ ಈಗಲೂ ಅನಿಭವಿಸುವಂತಾಗಿದೆ. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯ ಸಭೆಯ ವಿರೋದ ಪಕ್ಷದ ನಾಯಕರಾಗಿ ಇರುವವರಿಗೇ ಈ ಪರಿಸ್ಥಿತಿಯಾದರೆ ಇನ್ನು ಸಾಮಾನ್ಯ ದಲಿತರ ಪಾಡನ್ನು ಊಹಿಸಿದರೆ ಆತಂಕವಾಗುತ್ತಿದೆ. ಭಾಷಣದಲ್ಲಿ ನಾವೆಲ್ಲ ಹಿಂದು ನಾವೆಲ್ಲ ಇಂದುಒಂದು ಹೇಳುವ ಸಂಘಪರಿವಾರ ಸಂಘಟನೆಗಳು ಈ ರೀತಿಯ ಘಟನೆಗಳನ್ನು ನಡೆಸಿ ಅಸ್ಪ್ರಶ್ಯತೆಯನ್ನು ಮುಂದುವರಿಸುತ್ತಿರುವುದು ಖಂಡನೀಯ.

ಕರ್ನಾಟಕದಲ್ಲಿಯೂ ದಲಿತ ಸಮುದಾಯದ ಪ್ರಮುಖ ನಾಯಕರಾದ ಪ್ರಿಯಾಂಕ್ ಖರ್ಗೆ ಅವರು ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಬಿಜೆಪಿ ಹಾಗೂ ಅದರ ಬೆಂಬಲಿಗರಿಂದ ನಡೆದ ರಾಜಕೀಯ ಟೀಕೆಗಳು ಮತ್ತು ವಿರೋಧವನ್ನು ಗಮನಿಸಿದಾಗ, ದಲಿತ ನಾಯಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ರಾಜಕೀಯವನ್ನು ಸಮಾಜ ಗಂಭೀರವಾಗಿ ಪ್ರಶ್ನಿಸಬೇಕಾಗಿದೆ.

ಬಿಜೆಪಿ ಮತ್ತು ಬಿಜೆಪಿ ಪರ ಸಂಘಟನೆಗಳು ನಿಜವಾಗಿಯೂ ಅಸ್ಪೃಶ್ಯತೆ ಹಾಗೂ ಜಾತಿ ತಾರತಮ್ಯವನ್ನು ವಿರೋಧಿಸುತ್ತಿದ್ದರೆ, ಇಂತಹ ಘಟನೆಗಳನ್ನು ಸ್ಪಷ್ಟವಾಗಿ ಖಂಡಿಸಬೇಕು. ಧರ್ಮದ ಹೆಸರಿನಲ್ಲಿ ಯಾರನ್ನೂ ಕೀಳಾಗಿ ಕಾಣುವುದು, ವ್ಯಕ್ತಿಯ ಜಾತಿಯ ಆಧಾರದಲ್ಲಿ ಪವಿತ್ರ ಅಪವಿತ್ರ ಎಂಬ ಭೇದ ಸೃಷ್ಟಿಸುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ.

ಮನುಸ್ಮೃತಿಯಂತಹ ಜಾತಿ ವ್ಯವಸ್ಥೆಯನ್ನು ಸಮರ್ಥಿಸುವ ಚಿಂತನೆಗಳಿಗೆ ಬೆಂಬಲ ನೀಡುವ ಶಕ್ತಿಗಳೊಂದಿಗೆ ರಾಜಕೀಯವಾಗಿ ಗುರುತಿಸಿಕೊಂಡಿರುವ ಹಿಂದುಳಿದ ವರ್ಗಗಳ ಹಾಗೂ ದಲಿತ ಸಮುದಾಯದ ಕಾರ್ಯಕರ್ತರು ಇಂತಹ ಘಟನೆಗಳನ್ನು ಇನ್ನಾದರೂ ಗಂಭೀರವಾಗಿ ಪರಾಮರ್ಶಿಸಬೇಕು. ದಲಿತರನ್ನು ಅವಮಾನಿಸುವವರಿಗೆ ನಮ್ಮ ದಿಕ್ಕಾರವಿದೆ. ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯಕ್ಕೆ ಶಾಶ್ವತವಾಗಿ ಅಂತ್ಯ ಹಾಡಿ, ಸಂವಿಧಾನದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳನ್ನು ಎತ್ತಿಹಿಡಿಯುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಶುಭದರಾವ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments