ಆರ್ಸಿಬಿ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತಕ್ಕೆ ಬಲಿಯಾದ ಹೆಬ್ರಿಯ ವಿದ್ಯಾರ್ಥಿನಿ ಚಿನ್ಮಯಿ ಶೆಟ್ಟಿ ಅವರ ಹೆಬ್ರಿ ಇಂದಿರಾ ನಗರದಲ್ಲಿರುವ ಮನೆಗೆ ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ ಭೇಟಿ ನೀಡಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಕೊಡ ಮಾಡಿದ 25 ಲಕ್ಷ ರೂ. ಚೆಕನ್ನು ಏ. 10 ರಂದು ಅವಳ ತಂದೆ ಕರುಣಾಕರ ಶೆಟ್ಟಿ ಅವರಿಗೆ ಹಸ್ತಾಂತರಿಸಿ ಆಕೆಯ ತಂದೆ ತಾಯಿ ಮತ್ತು ಸಹೋದರನಿಗೆ ಸಾಂತ್ವನ ಹೇಳಿದರು.
ಚಿನ್ಮಯ್ ಶೆಟ್ಟಿಯ ತಂದೆ ತಾಯಿ ಸಹೋದರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ತಾಯಿಯನ್ನು ತಬ್ಬಿ ಹಿಡಿದು ನಿಮ್ಮೊಂದಿಗೆ ಸದಾ ನಾವಿದ್ದೇವೆ ಎಂದು ಭಾವುಕರಾದರು.
ಈ ಸಂದರ್ಭದಲ್ಲಿಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಎ. ಸಿ. ರಶ್ಮಿ, ಹೆಬ್ರಿ ತಹಸಿಲ್ದಾರ್ ಪ್ರಸಾದ್ ಎಸ್. ಎ., ಹೆಬ್ರಿ ಠಾಣಾಧಿಕಾರಿ ಮಹೇಶ್ ಟಿ., ಹೆಬ್ರಿ ತಾಲೂಕು ಗ್ಯಾರೆಂಟಿ ಸಮಿತಿ ಅಧ್ಯಕ್ಷ ಶಂಕರ್ ಸೇರಿಗಾರ್, ಚಿನ್ಮಯ್ ತಾಯಿ ಶಾಂತ ಶೆಟ್ಟಿ, ಸಹೋದರ ಮತ್ತು ಅವರ ಕುಟುಂಬದವರು ಉಪಸ್ಥಿತರಿದ್ದರು.
ಹೆಬ್ರಿ ಶಾಂತ ಶೆಟ್ಟಿ ಹಾಗೂ ಉಪ್ಪಿನಂಗಡಿ ಕರುಣಾಕರ ಶೆಟ್ಟಿ ಅವರ ಪುತ್ರಿಯಾಗಿರುವ ಚಿನ್ಮಯಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದು, ಕಾಲೇಜಿನ ಸ್ನೇಹಿತರೊಂದಿಗೆ ಆರ್ಸಿಬಿ ಸಂಭ್ರಮಾಚರಣೆಗೆ ತೆರಳಿದ್ದಳು.
ಯಕ್ಷಗಾನ, ಭರತನಾಟ್ಯ,ಫಿಲಂ ಡ್ಯಾನ್ಸ್ ಮೊದಲಾದ ಕಲಾ ಪ್ರಕಾರಗಳಲ್ಲಿ ಪ್ರತಿಭಾವಂತೆ.’ಯಕ್ಷತರಂಗ ಬೆಂಗಳೂರು’ ನ ಯಕ್ಷಗಾನ ಕಲಿಕಾ ವಿದ್ಯಾರ್ಥಿ ಹಾಗೂ ಪ್ರತಿಭಾ ವಂತ ಬಾಸ್ಕೆಟ್ ಬಾಲ್ ಕ್ರೀಡಾಪಟುವಾಗಿದ್ದಳು.ಯಾವುದೇ ವಾಹನ ನೀಡಿದರು ಚಲಾಯಿಸುವ ಧೈರ್ಯವಂತೆ. ಕಾಲ್ತುಳಿತಕ್ಕೆ ಒಳಗಾಗಿ ತೀವ್ರ ಆಸ್ಪೃಸ್ತಗೊಂಡವಳನ್ನು ಎತ್ತಿ ಆಂಬುಲೆನ್ಸ್ ಗೆ ಹಾಕುವಾಗಲೂ ಕೂಡ ತನ್ನ ತಂದೆಯ ದೂರವಾಣಿ ನಂಬರನ್ನು ಹೇಳಿ ಸ್ವಲ್ಪ ಹೊತ್ತಿನಲ್ಲಿ ಪ್ರಾಣಪಕ್ಷಿ ಹಾರಿ ಹೋಗಿತ್ತು. ಸಕಲಕಲಾ ಪ್ರವೀಣೆ ಪ್ರತಿಭಾವಂತ ಹೆಣ್ಣು ಮಗಳನ್ನು ಕಳೆದುಕೊಂಡ ಕುಟುಂಬ ಶೋಕಸಾಗರದಲ್ಲಿ ಮುಳುಗಿದೆ.