ರಾಣಿಯಲ್ಲ ಅವಳು ‘ಮಹಾರಾಣಿ’,ಒಂದು ಕತ್ತೆಗೆ ಇಷ್ಟೊಂದು ಅಭಿಮಾನಿಗಳು ಇರಲು ಸಾಧ್ಯವೇ?
-ಬಜಗೋಳಿಯ ಪರಿಸರದ ಸಾರ್ವಜನಿಕರ ಅಚ್ಚುಮೆಚ್ಚಿನ ‘ರಾಣಿ’ ಇನ್ನಿಲ್ಲ
ಬಜಗೋಳಿ ಪರಿಸರದಲ್ಲಿ ಜನರ ಪ್ರೀತಿಗೆ ಪಾತ್ರಳಾಗಿದ್ದ ರಾಣಿ ಮೃತಪಟ್ಟಿದ್ದಾಳೆ.ನಿನ್ನೆ ನೀವೆಲ್ಲ ಗಮನಿಸಿದ್ದೀರಾ?ಬಜಗೋಳಿ ಪರಿಸರದವರ,ಬಜಗೋಳಿ ಹೈಸ್ಕೂಲ್ ನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ, ಕಲಿತ ವಿದ್ಯಾರ್ಥಿಗಳ,ಹಳೆ ವಿದ್ಯಾರ್ಥಿಗಳ ಬಹುತೇಕರ ಸ್ಟೇಟಸ್ ನಲ್ಲಿ ಕತ್ತೆಗೊಂದು ಶ್ರದ್ಧಾಂಜಲಿ.ಯಾವುದು ಈ ಕತ್ತೆ?ಕತ್ತೆಗೆ ರಾಣಿ ಎಂದು ಹೆಸರಿಟ್ಟದ್ದು ಯಾರು?ರಾಣಿ ಬಜಗೋಳಿಗೆ ಹೇಗೆ ಬಂದಳು? ಒಂದು ಕತ್ತೆ ಸಾವಿಗೆ ಇಷ್ಟೊಂದು ಜನ ಮರುಗಲು ಸಾಧ್ಯವೇ ಇರಲು ಸಾಧ್ಯವೇ ಎಂಬ ಪ್ರಶ್ನೆ ರಾಣಿಯನ್ನು ನೋಡದವರಿಗೆ ಮೂಡದೇ ಇರದು
ರಾಣಿ ಕಳೆದ 25 ವರ್ಷಗಳಿಂದ ಬಜಗೋಳಿಯಲ್ಲಿಯೇ ಬೆಳೆದವಳು.ಹುಟ್ಟಿದ್ದೆಲ್ಲಿ ಕೇಳಬೇಡಿ.ಅದು ಬಜಗೋಳಿಯವರಿಗೂ ಗೊತ್ತಿಲ್ಲ.25ವರ್ಷಗಳ ಹಿಂದೆ ಸರ್ಕಸ್ ನವರು ದಿಂಡಿಬಿರಿಗೆ ಬಂದಿದ್ದ ಸಂದರ್ಭ ಊರವರಿಗೂ ಸರ್ಕಸ್ ಅವರಿಗೂ ಗಲಾಟೆಯಾಗಿ ಸರ್ಕಸ್ ನವರು ಕತ್ತೆಯನ್ನು ಬಿಟ್ಟು ಅಲ್ಲಿಯೇ ಬಿಟ್ಟು ಬೆಳಿಗ್ಗೆ ಆಗುವುದರೊಳಗೆ ಊರು ಬಿಟ್ಟಿದ್ದರಂತೆ ಎಂದು ಹಿರಿಯರೊಬ್ಬಳು ಹೇಳುತ್ತಿದ್ದರು.
ಕತ್ತೆಗೆ ರಾಣಿಯೆಂದು ಹೆಸರಿಟ್ಟದ್ದು ಡಿಡಿ೦ಬಿರಿಯ ಅನಂತ್ ರಾಜ್ ಜೈನ್.ಅಪಘಾತವಾಗಿ ಬಿದ್ದಿದ್ದ ಕತ್ತೆಯನ್ನು ಉಪಚರಿಸಿ ಬಳಿಕ ಅದಕ್ಕೆ ರಾಣಿಯೆಂದು ಹೆಸರಿಟ್ಟಿದ್ದಾರೆ.
ಸರ್ಕಸ್ ನವರನ್ನು ಬಿಟ್ಟಮೇಲೆ ರಾಣಿದ್ದು ಐಷಾರಾಮಿ ಜೀವನ.ಬೆಳಿಗ್ಗೆ ಬಜಗೋಳಿ ಪಂಚಾಯತ್ ಮೈದಾನದಿಂದ ಹೊರಟರೆ ಮಧ್ಯಾಹ್ನ ಬಜಗೋಳಿ ಶಾಲೆ! ಆಮೇಲೆ ಸಂಜೆ ದಿಂಡಿಬಿರಿ ಪರಿಸರ ,ಆಮೇಲೆ ಮತ್ತೆ ಬಜಗೋಳಿ ಪೇಟೆ.ಬಹುತೇಕ ಅಂಗಡಿಗಳಲ್ಲಿ ರಾಣಿಗೆ ದಿನನಿತ್ಯ ಮಾಮೂಲಿ ಫಿಕ್ಸ್.ಹೆಚ್ಚಿನ ಅಂಗಡಿ,ಹೋಟೆಲ್ ಮಾಲೀಕರು ರಾಣಿಗೊಂದು ಪಾಲು ಆಹಾರ ಇಟ್ಟೇ ಇಡುತ್ತಿದ್ದರು.ಒಂದೆರಡು ದಿನ ರಾಣಿ ಏನಾದರೂ ಅಂಗಡಿ ಬಾಗಿಲಿಗೆ ಬರದೇ ಇದ್ದರೆ ಅವರಿವರಲ್ಲಿ ‘ರಾಣಿಯನ್ನು ನೋಡಿದ್ದೀರಾ?’ ವಿಚಾರಿಸುವುದೂ ಇದೆ.
ರಾಣಿಯ ದಾರಿ ಕಾಯುವವರು ಒಬ್ಬಿಬ್ಬರಲ್ಲ.ಬಜಗೋಳಿಯ ಹೊಟೇಲ್ ಮಾಲೀಕರು,ಗೂಡಂಗಡಿ,ದಿನಸಿ ಅಂಗಡಿಯವರು,ರಿಕ್ಷಾ ಚಾಲಕರು,ಶಾಲಾ ವಿದ್ಯಾರ್ಥಿಗಳು,ಶಾಲೆಯ ಶಿಕ್ಷಕರೂ ಕನ್ನಡಕ್ಕದ ಒರೆಯಿಂದ ಕಿಟಕಿಯ ಹೊರಗಡೆ ಮೈದಾನಕ್ಕೆ ಕಣ್ಣು ಹಾಯಿಸಿದಾಗ ರಾಣಿ ಮೈದಾನದಲ್ಲಿ ಕಂಡರೆ ಮನಸಲ್ಲೇ ಒಂದು ಸಮಾಧಾನ.ದಿಂಡಿಬಿರಿ ನಿವಾಸಿಗಳಿಗೆ ರಾಣಿ ದಿನನಿತ್ಯ ಅತಿಥಿ.
ವಿದ್ಯಾರ್ಥಿಗಳಿಗಂತೂ ರಾಣಿ ಅಚ್ಚುಮೆಚ್ಚು.ಯಾರಿಗೂ ಸಣ್ಣ ಉಪದ್ರ ಮಾಡದ ರಾಣಿಯನ್ನು ಎಲ್ಲರೂ ಪ್ರೀತಿಸುತ್ತಿದ್ದರು.ಬೆಳಿಗ್ಗೆ ಬಜಗೋಳಿ ಪೇಟೆ ಬಿಟ್ಟರೆ ಮಧ್ಯಾಹ್ನ ಊಟಕ್ಕೆ ಬಿಡುವಾಗ ಬಜಗೋಳಿ ಹೈಸ್ಕೂಲ್ ನಲ್ಲಿ ರಾಣಿ ಹಾಜರ್.ಪೇಟೆಯಲ್ಲಿ ಟಿಫಿನ್ ಆದರೆ ಮಧ್ಯಾಹ್ನ ಊಟ ಶಾಲೆಯಲ್ಲಿ.ಕೇವಲ ಊಟಕ್ಕಾಗಿ ಅಲ್ಲ, ಶಾಲಾ ಮಕ್ಕಳನ್ನು ಭೇಟಿಯಾಗಬೇಕು.ಅವರು ರಾಣಿಗೆ ಒಂದಷ್ಟು ಕಿಚಾಯಿಸಬೇಕು ಎಂದು ರಾಣಿಗೆ ಅಸೆ.ಬಳಿಕ ತರಗತಿ ಬೆಲ್ ಆದಮೇಲೆ ಅವಳೂ ಅಲ್ಲಿಂದ ತಲೆ ತಗ್ಗಿಸಿ ಮುಂದೆ ಹೊರಟರೆ ಮುಂದೆ ದಿಂಡಿಬಿರಿಯ ಅಂಗಡಿಗಳ ಎದುರು ಹಾಜರ್.ಸ್ವಲ್ಪ ತಡವಾಗಿ ತಲುಪಿದರೇ ಒಂದರೆಡು ಭಾರಿ ಪ್ರೀತಿಯಿಂದ ಗದರಿ ಆಗುತ್ತದೆ.ಯಾಕೆಂದರೆ ರಾಣಿಯ ಹೊಟ್ಟೆ ತುಂಬಿದ್ದರೆ ಆ ಅಂಗಡಿಯ ಮಾಮೂಲಿಯನ್ನೂ ತಿನ್ನಬೇಕಲ್ವಾ.ಒಂದೆರಡು ದಿನ ಅಂಗಡಿ ಬಾಗಿಲಿಗೆ ಹೋಗದೆ ಇದ್ದರೆ ಸ್ವಲ್ಪ ಬೈಗುಳ ರಾಣಿ ತಿನ್ನಲೇ ಬೇಕು.
ರಾಣಿಗೆ ಜನರ ಪ್ರೀತಿಗೆ ಕೊರತೆಯಿರಲಿಲ್ಲ.ಇತ್ತೀಚೆಗೆ ಅಪಘಾತದಲ್ಲಿ ಕಾಲು ಗಾಯಗೊಂಡು ನರಳುತ್ತಿದ್ದಾಗ ಊರವರೇ ಉಪಚರಿಸಿ ಅವಳು ಮತ್ತೆ ನಡೆಯುವಂತೆ ಮಾಡಿದ್ದರು.ಎಲ್ಲರ ಪ್ರೀತಿಯ ರಾಣಿ ಇದೀಗ ಸಾವನ್ನಪ್ಪಿದ್ದಾಳೆ.ಕಣ್ಣೆರಾಗದಿದ್ದರೂ ಮನಸ್ಸಿನ ಮೂಲೆಯಲ್ಲಿ ಒಂದು ಸಣ್ಣ ಮೌನ ಅಷ್ಟೇ.
ರಾಣಿ ಸಾಕು ಪ್ರಾಣಿಗಿಂತಲೂ ಹೆಚ್ಚು ಪ್ರೀತಿ ಗಳಿಸಿದವಳು.ರಾಣಿಯನ್ನು ದ್ವೇಷಿಸಿದವರು ಯಾರೂ ಇಲ್ಲ.ಒಂದು ಮನೆಯಲ್ಲಿ ಸಾಕು ಪ್ರಾಣಿ ಸತ್ತರೆ ಮನೆಯವರು ಯಾವ ರೀತಿ ಮರುಗುತ್ತಾರೆಯೋ ಅದೇ ರೀತಿ ಒಂದು ಕತ್ತೆ ಸತ್ತಾಗ ಬಜಗೋಳಿಯ ಸುತ್ತ ಮುತ್ತಲಿನವರಿಗೆ,ಬಜಗೋಳಿ ಶಾಲೆಯಲ್ಲಿ ಈಗ ಕಲಿಯುತ್ತಿರುವವರಿಗೆ ಮಾತ್ರ ಅಲ್ಲ,ಸ್ಟೇಟಸ್ ನಲ್ಲಿ ರಾಣಿಯ ಚಿತ್ರ ನೋಡಿ ಹಳೆ ವಿದ್ಯಾರ್ಥಿಗಳಿಗೂ ಕೂಡ ಬೇಜಾರು ತರಿಸಿದೆ.ನಿನ್ನೆಯಂತೂ ಎಲ್ಲರ ವಾಟ್ಸಾಪ್ ಸ್ಟೇಟಸ್ ಗಳಲ್ಲಿ ರಾಣಿಗೆ ಶ್ರದ್ದಾ೦ಜಲಿ.ಅವಳು ಮಹಾರಾಣಿಯಲ್ಲದೆ ಮತ್ತಿನ್ನೇನು?
-ಪ್ರಶಾಂತ್ ಆಚಾರ್ಯ
(ನಿಮ್ಮ ಅನಿಸಿಕೆ ವಾಟ್ಸಾಪ್ ಮಾಡಿ – 9019399015 )