ಪರಶುರಾಮ ಥೀಂ ಪಾರ್ಕ್ ಕಾಮಗಾರಿ ತಡೆ ಕುರಿತು ಮುತಾಲಿಕ್ ಸಲ್ಲಿಸಿದ್ದ ಅರ್ಜಿ ವಜಾ
ಕಾಂಗ್ರೆಸ್ಸಿನ ದ್ವಿಪಾತ್ರದ ನಟನೆಗೆ ನ್ಯಾಯಲಯದಲ್ಲಿ ಹಿನ್ನಡೆ:ಕಾರ್ಕಳ ಬಿಜೆಪಿ
ಕಾರ್ಕಳ:ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಪೂರ್ತಿಯಾಗಿಲ್ಲ, ವಿನ್ಯಾಸ ಬದಲಾವಣೆ ಇದೆ ಎಂದು ಇಲಾಖೆ ಹೇಳುತಿದ್ದರೂ ಕಾಂಗ್ರೆಸ್ ಅದರ ʻಬಿ ಟೀಂʼ ಮೂಲಕ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಪ್ರಯತ್ನ ನಡೆಸಿತ್ತು. ಕಾಂಗ್ರೆಸ್ನ ಮಾನಸಿಕತೆಯ ದ್ವಿಪಾತ್ರದ ನಟನೆಗೆ ಕೊನೆಗೂ ನ್ಯಾಯಲಯದಲ್ಲಿ ಹಿನ್ನಡೆಯಾಗಿದೆ. ಕಾಂಗ್ರೆಸ್ ಮತ್ತದರ ಬಿ ಟೀಂನ ಸುಳ್ಳು, ಅಪಪ್ರಚಾರದ ವಿರುದ್ಧ ನೈಜ ಹಿತಾಶಕ್ತಿಗೆ ಗೆಲುವಾಗಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಹೇಳಿದ್ದಾರೆ.
ಕಾರ್ಕಳ ಕ್ಷೇತ್ರವನ್ನು ಪ್ರವಾಸಿ ಕ್ಷೇತ್ರವನ್ನಾಗಿಸಿ ಆರ್ಥಿಕತೆ ಬಲಗೊಳಿಸುವ ದೂರದೃಷ್ಟಿಯ ಯೋಜನೆಗೆ ತಡೆಯೊಡ್ಡಿ ಪರಶುರಾಮ ಥೀಂ ಪಾರ್ಕ್ ಅನ್ನು ಶಾಶ್ವತ ಬಂದ್ ಗೊಳಿಸುವ ಕಾಂಗ್ರೆಸ್ನ ʻಎ ಮತ್ತು ಬಿ ಟೀಂʼ ನ ಹುನ್ನಾರಕ್ಕೆ ಕೊನೆಗೂ ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಳ್ಳುವ ಮೂಲಕ ಇಬ್ಬರಿಗೂ ಹಿನ್ನಡೆಯಾಗಿದೆ.
ಕಾರ್ಕಳದ ಅಭಿವೃದ್ಧಿ ಮತ್ತು ಪ್ರವಾಸಿ ತಾಣವಾಗುವುದನ್ನು ಕಾಂಗ್ರೆಸ್ಗೆ ಮೊದಲಿನಿಂದಲೂ ಸಹಿಸಲಾಗುತಿಲ್ಲ. ಅದೇ ಕಾರಣಕ್ಕೆ ಕ್ಷೇತ್ರದಲ್ಲಿ ನಿರಂತರವಾಗಿ ವಿವಿಧ ರೀತಿಯ ಅಪಪ್ರಚಾರದಲ್ಲಿ ಅದು ತೊಡಗಿತ್ತು. ಕುಂಟುನೆಪಗಳ ಮೂಲಕ ಅಭಿವೃದ್ಧಿಗೆ ತಡೆಯೊಡ್ಡುವ, ಕಾಮಗಾರಿ ನಿಲ್ಲಿಸುವ ಕೆಲಸ ಮಾಡುತ್ತಾ ಬಂದಿತ್ತು.
ಅಪಪ್ರಚಾರವನ್ನೇ ಸಾವಿರ ಬಾರಿ ಪುನರುಚ್ಚರಿಸುತ್ತ ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದ ಕಾಂಗ್ರೆಸ್ ಎ ಮತ್ತು ಬಿ ಟೀಂನ ನಿಜ ಬಣ್ಣ ಬಯಲಾಗಿದೆ.
ಕಾಂಗ್ರೆಸ್ ಕಾಮಗಾರಿ ಮುಂದುವರೆಸಬೇಕು ಎನ್ನುತ್ತಲೆ ಬಿ ಟೀಂ ಮೂಲಕ ನ್ಯಾಯಲಯದಲ್ಲಿ ತಡೆಯಾಜ್ಞೆಗೆ ಪ್ರಯತ್ನಿಸಿ ಕೈ ಸುಟ್ಟುಕೊಂಡಿದೆ. ಕಾಂಗ್ರೆಸ್ನ ದ್ವಿಪಾತ್ರದ ಕರಾಳ ಮುಖವಾಡ ಕಳಚಿದೆ. ಅಭಿವೃದ್ಧಿ ವಿರೋಧಿಗಳ ಕುಟೀಲ ರಾಜಕೀಯ ನೀತಿಗೆ ಸೋಲಾಗಿದೆ ಎಂದಿದ್ದಾರೆ.
ಚುನಾವಣೆಯಲ್ಲಿ ಬಿ ಟೀಂ ಹೊರಗಿನಿಂದ ಬಂದು ಕ್ಷೇತ್ರದಲ್ಲಿ ಅಪಪ್ರಚಾರ ನಡೆಸಿತ್ತು. ಅವರನ್ನು ಪೋಷಿಸಿದ ಕಾಂಗ್ರೆಸ್ ಯೋಜನೆ ನಿಲ್ಲಿಸಲು ಶತಾಯಗತಾಯ ಪ್ರಯತ್ನ ನಡೆಸಿತ್ತು, ಅಲ್ಲಿ ಮತ್ತೆ ಕ್ರಶರ್ ಅಧಿಪತ್ಯ ಸ್ಥಾಪಿಸಲು ಕೆಲವರು ಹುನ್ನಾರ ನಡೆಸುತ್ತಿದ್ದಾರೆ. ಮೂರ್ತಿಯ ವಿನ್ಯಾಸ ಮತ್ತು ಮುಂದುವರೆದ ಕಾಮಗಾರಿ ನಿಲ್ಲಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕಾರ್ಕಳದ ಕಾಂಗ್ರೆಸ್ಸಿಗೆ ಅಭಿವೃದ್ಧಿ, ಜನಪರ ಹಿತಾಶಕ್ತಿಯ ಅಗತ್ಯವಿಲ್ಲವೇ ಎಂದು ಪ್ರಶ್ನಿಸಿರುವ ಅವರು ಕಾಂಗ್ರೆಸ್ ಒಟ್ಟಾರೆ ವಾಮಮಾರ್ಗದಲ್ಲಿ ಯೋಜನೆಯನ್ನು ರದ್ದುಗೊಳಿಸಲು ಹುನ್ನಾರ ನಡೆಸುತ್ತಿದೆ, ಕಾಂಗ್ರೆಸ್ ಅಭಿವೃದ್ದಿ ವಿರೋಧಿ ಕಾಂಗ್ರೆಸ್ ಎಂದು ಟೀಕಿಸಿದ್ದಾರೆ.