ಕಾರ್ಕಳಕ್ಕೆ ಆಗಮಿಸುತ್ತಿದ್ದರೂ ಸ್ಥಳೀಯ ನಾಯಕರಿಗೆ ಇಲ್ಲ ಮಾಹಿತಿ
ಸ್ಥಳೀಯ ಕೈ ಮುಖಂಡರುಗಳಿಗೆ ಕ್ಯಾರೇ ಎನ್ನದ ಮಧು ಬಂಗಾರಪ್ಪ ವಿರುದ್ಧ ಪ್ರತಿಭಟನೆಯ ಎಚ್ಚರಿಕೆ ನೀಡಿದ ಕಾರ್ಕಳ ಕಾಂಗ್ರೆಸ್ ಕಾರ್ಯಕರ್ತರು
ಕಾರ್ಕಳ:ಶಿಕ್ಷಣ ಸಚಿವ ಮಧು ಬಂಗಾಪ್ಪ ವಿರುದ್ದ ಕಾರ್ಕಳ ಕಾಂಗ್ರೆಸ್ ಮುಖಂಡರುಗಳು ಹಾಗೂ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ ಅಲ್ಲದೆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿಯೇ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಏನಿದು ಘಟನೆ:ಇಂದು ನಡೆಯುತ್ತಿರುವ (ಡಿ.23)ಕಾರ್ಕಳದ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಕಾರ್ಯಕ್ರಮಕ್ಕೆ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪರವರು ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ.ಕಾಂಗ್ರೆಸ್ ಸರ್ಕಾರದ ಸಚಿವರೋರ್ವರು ಕಾರ್ಕಳ ತಾಲೂಕಿಗೆ ಆಗಮಿಸುತ್ತಿದ್ದರೂ ಸ್ಥಳೀಯ ನಾಯಕರಿಗೆ ಈ ಬಗ್ಗೆ ಮಾಹಿತಿ ನೀಡದೆ ಇರುವುದು ಬೇಸರ ತರಿಸಿದೆ.
‘ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಪ್ರಚಾರದಲ್ಲಿ ತೊಡಗಿಸಿಕೊಂಡು,ಕಾಂಗ್ರೆಸ್ ಅಭ್ಯರ್ಥಿ ಸೋಲಲು ಮುಖ್ಯ ಪಾತ್ರ ವಹಿಸಿದ್ದ ವ್ಯಕ್ತಿಯ ಒಡೆತನದ ಶಿಕ್ಷಣ ಸಂಸ್ಥೆಗೆ ಕಾಂಗ್ರೆಸ್ ಸರ್ಕಾರದ ಸಚಿವರಾಗಿರುವ ಮಧುಬಂಗಾರಪ್ಪರವರು ಆಗಮಿಸುತ್ತಿರುವುದು ನಮಗೆ ಬೇಸರ ತರಿಸಿದೆ.ಯಾರು ನಮ್ಮ ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಪ್ರಯತ್ನ ಪಟ್ಟಿದ್ದಾರೋ ಅವರ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗುವುದಾದರೇ,ನಮ್ಮ ಕಾರ್ಯಕರ್ತರಿಗೆ ನಾವು ಏನು ಉತ್ತರ ಕೊಡಬೇಕು?’ ಎಂದು ಕಾಂಗ್ರೆಸ್ ಪದಾದಿಕಾರಿಗಳು ಹಾಗೂ ನಾಯಕರು ಪ್ರಶ್ನಿಸುತ್ತಿದ್ದಾರೆ.
ಪ್ರತಿಭಟನೆಯ ಎಚ್ಚರಿಕೆ:ಮಧು ಬಂಗಾರಪ್ಪ ಈ ನಡೆ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಸಾಕಷ್ಟು ಆಕ್ರೋಶ ಉಂಟು ಮಾಡಿದೆ.ಅಲ್ಲದೆ ಶಿಕ್ಷಣ ಸಂಸ್ಥೆಯ ಎದುರೇ ಕಪ್ಪು ಬಟ್ಟೆ ಪ್ರದರ್ಶಿಸಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಇದೆ ರೀತಿಯ ಘಟನೆಯೊಂದು ಕಳೆದ ತಿಂಗಳು ವರದಿಯಾಗಿದ್ದು ಇಲ್ಲಿ ನೆನಪಿಸಬಹುದು.ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಮಾಲಕರೋರ್ವರು ಚುನಾವಣೆ ಸಂದರ್ಭ ಬಿಜೆಪಿಯ ಪರ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.ಆದರೆ ಚುನಾವಣೆಯ ಬಳಿಕ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಸಚಿವರೋರ್ವರು ಆ ಸಂಸ್ಥೆಯ ಮಾಲಕರೊಂದಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದಾಗಿ ನಿರ್ಧರಿಸಲಾಗಿತ್ತು.ಇದು ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿ ಕಾರ್ಯಕರ್ತರು ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದರು.ಇದರಿಂದಾಗಿ ಕೊನೆಯ ಕ್ಷಣದಲ್ಲಿ ಆ ಭೇಟಿ ರದ್ದಾಗಿತ್ತು.