ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯಲ್ಲಿ ಬೇಸಿಗೆ ಶಿಬಿರ
ಕಾರ್ಕಳ: ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಸ್ಕೌಟ್ಸ್ – ಗೈಡ್ಸ್ ಮತ್ತು ಕಬ್ – ಬುಲ್ಬುಲ್ ವಿದ್ಯಾರ್ಥಿಗಳಿಗೆ 2 ದಿನಗಳ ಕಾಲ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ. ಸ್ಕೌಟ್ಸ್ – ಗೈಡ್ಸ್ ಶಿಕ್ಷಕರಾದ ಶ್ರೀಯುತ ಉಮೇಶ್ ಕಾಂಚನ್, ಡಾನ್ ಬಾಸ್ಕೋ ಶಾಲೆ ಶಿರ್ವ ಇವರು ಧ್ವಜಾರೋಹಣವನ್ನು ಮಾಡುವ ಮೂಲಕ ಸಾಂಕೇತಿಕವಾಗಿ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಮಯದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಜಾಲ್ಸೂರು ಉಪಸ್ಥಿತರಿದ್ದರು.
ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಿಬಿರದ ಉದ್ಘಾಟನೆಯನ್ನು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಜಿಲ್ಲಾ ಕಾರ್ಯದರ್ಶಿಯಾದ ಆನಂದ್ ಬಿ. ಅಡಿಗರವರು ನೆರವೇರಿಸಿದರು. ಅವರು ಮಾತನಾಡುತ್ತಾ ಜಾತಿ, ಧರ್ಮ, ಮತ ಬೇಧವಿಲ್ಲದೆ ನಾವೆಲ್ಲರೂ ಒಂದೇ ಎಂಬುದನ್ನು ಸ್ಕೌಟ್ಸ್ ಮತ್ತು ಗೈಡ್ಸ್ ತಿಳಿಸುತ್ತದೆ ಎಂದು ಹೇಳಿ ಶಿಬಿರಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಶ್ರೀಯುತ ಪ್ರಕಾಶ್, ಶಿಕ್ಷಣ ಸಂಯೋಜಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಾರ್ಕಳ ಅವರು ಮಾತನಾಡುತ್ತಾ, “ಸ್ಕೌಟ್ಸ್ನಲ್ಲಿ ವಿದ್ಯಾರ್ಥಿಗಳು ಪಡೆಯುವ ಅನುಭವ ಬೇರೆಲ್ಲಿಯೂ ಸಿಗಲಿಕ್ಕಿಲ್ಲ ಆದ್ದರಿಂದ ಅದನ್ನು ಬದುಕಲ್ಲಿ ಅಳವಡಿಸಿಕೊಂಡು ಸತ್ಪ್ರಜೆಗಳಾಗಿ ಬಾಳಿ” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ರಾಜ್ಯ ಸ್ಕೌಟ್ಸ್ ಮತ್ತು ಗೈಡ್ಸ್ನ ಸಹಾಯಕ ಆಯುಕ್ತೆಯಾಗಿರುವ ಶ್ರೀಮತಿ ಸುಮನಾ ಶೇಖರ್ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಶಿಬಿರಕ್ಕೆ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಡೊಮಿನಿಕ್ ಅಂದ್ರಾದೆ ವಹಿಸಿದ್ದರು ಅವರು ಮಾತನಾಡುತ್ತಾ “ಬದಲಾದವಣೆ ಜಗದ ನಿಯಮ ವಿದ್ಯಾರ್ಥಿಗಳಾದ ನೀವು ನಿಮ್ಮಲ್ಲಿ ಉತ್ತಮ ಬದಲಾವಣೆಯನ್ನು ತಂದುಕೊಂಡು ಉತ್ತಮ ನಾಗರಿಕರಾಗಿ ಬಾಳಿ” ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಗೈಡ್ಸ್ ಆಯುಕ್ತೆ ಶ್ರೀಮತಿ ಜ್ಯೋತಿ ಜೆ ಪೈ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಕಳ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷೆಯಾಗಿರುವ ಶ್ರೀಮತಿ ಸಾವಿತ್ರಿ ಮನೋಹರ್, ಸ್ಕೌಟ್ಸ್ ಮತ್ತು ಗೈಡ್ಸ್ನ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾಗಿರುವ ಜಗದೀಶ್ ಹೆಗ್ಡೆ, ಶಿಕ್ಷಕ – ರಕ್ಷಕ ಸಂಘದ ಪ್ರೌಢಶಾಲಾ ವಿಭಾಗದ ಅಧ್ಯಕ್ಷೆಯಾದ ಶ್ರೀಮತಿ ಹೇಮಲತಾ ಹಾಗೂ ಸಂಸ್ಥೆಯ ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಮೇರಿಯನ್ ಡಿಸೋಜಾರವರು ಉಪಸ್ಥಿತರಿದ್ದರು.
ಶಿಕ್ಷಕಿಯರಾದ ಶ್ರೀಮತಿ ವಿದ್ಯಾಶ್ರೀ ಸ್ವಾಗತಿಸಿ, ಶ್ರೀಮತಿ ಜಯಲಕ್ಷ್ಮಿ ಸುರೇಶ್ರವರು ವಂದಿಸಿದರು, ಶ್ರೀಮತಿ ರೇಖಾ ಸಂತೋಷ್ರವರು ಕಾರ್ಯಕ್ರಮದ ನಿರೂಪಣೆ ಮಾಡಿದರು.