ಹೆಬ್ರಿಯಲ್ಲಿ ಸೋಮವಾರ ಹಿರಿಯ ಸಹಕಾರಿ ದುರೀಣ ನೀರೆ ಕೃಷ್ಣ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹೆಬ್ರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆಯಲ್ಲಿ ಅಕ್ರಮ : ಆಡಳಿತ ಮಂಡಳಿ ರದ್ದು.
ಹೆಬ್ರಿ : ಹೆಬ್ರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಆಡಳಿತ ಮಂಡಳಿಗೆ ೨೦೨೩ನೇ ಜುಲೈನಲ್ಲಿ ನಡೆದ ಚುನಾವಣೆಯಲ್ಲಿ ಅಕ್ರಮವಾಗಿದೆ, ಆಡಳಿತ ಮಂಡಳಿಯನ್ನು ರದ್ದುಪಡಿಸುವಂತೆ ಕುಂದಾಪುರ ಸಹಕಾರಿ ಸಂಘಗಳ ನ್ಯಾಯಲಯ ಆದೇಶ ನೀಡಿದೆ ಎಂದು ಸಂಘದ ವಿರುದ್ಧ ಕಾನೂನು ಹೋರಾಟ ನಡೆಸಿರುವ ಹಿರಿಯ ಸಹಕಾರಿ ದುರೀಣ ನೀರೆ ಕೃಷ್ಣ ಶೆಟ್ಟಿ ತಿಳಿಸಿದರು.
ಅವರು ಸೋಮವಾರ ಹೆಬ್ರಿಯ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಹಿರಿಯ ಸಹಕಾರಿ ದುರೀಣ ನೀರೆ ಕೃಷ್ಣ ಶೆಟ್ಟಿ ಅವರ ದೂರಿನಂತೆ ರಾಜ್ಯ ಹೈಕೋರ್ಟ್ ನಿರ್ದೇಶನದ ಹಿನ್ನಲೆಯಲ್ಲಿ ಕುಂದಾಪುರ ಸಹಕಾರಿ ಸಂಘಗಳ ನ್ಯಾಯಲಯ ತನಿಖೆ ನಡೆಸಿ ಆದೇಶ ನೀಡಿದೆ. 69 ಅರ್ಹ ಮತದಾರರ ಪಟ್ಟಿಯ ಪ್ರಕಾರ ಚುನಾವಣೆಯನ್ನು ನಡೆಸಲು ಸಿದ್ಧತೆಯಾಗಿತ್ತು. ಚುನಾವಣೆಯ ದಿನ ಸಹಕಾರ ಇಲಾಖೆಯಿಂದ ನಿಯೋಜನೆಗೊಂಡ ಚುನಾವಣಾಧಿಕಾರಿ ರೋಹಿತ್ 100 ಮಂದಿಯ ಮತದಾರರ ಪಟ್ಟಿಯನ್ನು ಮಾಡಿ ಚುನಾವಣೆಯನ್ನು ನಡೆಸಿರುವುದನ್ನು ನ್ಯಾಯಲಯ ದೃಡಿಕರಿಸಿ 2023ನೇ ಜುಲೈ 9ರಂದು ಆಯ್ಕೆಗೊಂಡ ನಿರ್ದೇಶಕ ಮಂಡಳಿಯನ್ನು ರದ್ದುಗೊಳಿಸಿದೆ. ಶೀಘ್ರವಾಗಿ ಆಡಳಿತಾಧಿಕಾರಿ ನೇಮಕ ಮಾಡಲು ಆದೇಶ ನೀಡಿದೆ. ಹೊಸದಾಗಿ ಆಡಳಿತ ಮಂಡಳಿಗೆ ಚುನಾವಣೆ ನಡೆಸಲು ಸೂಚನೆ ನೀಡಿದೆ. ಸುಳ್ಳು ಮೋಸದ ಚುನಾವಣೆಯನ್ನು ನಡೆಸಿ ಸಂಘಕ್ಕೆ ಕಪ್ಪುಚುಕ್ಕೆ ತಂದು ಆರ್ಥಿಕ ನಷ್ಟವನ್ನು ಉಂಟು ಮಾಡಿದ ಚುನಾವಣಾಧಿಕಾರಿ ರೋಹಿತ್ ಮತ್ತು ಸಂಬಂಧಪಟ್ಟವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮಕೈಗೊಳ್ಳುವಂತೆ ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದ್ದಾರೆ.
ಹೆಬ್ರಿ ಡೈರಿಗೆ ಮೀಸಲಿಟ್ಟ ಹುಲ್ಲುಗಾವಲು ಪರಭಾರೆ : ತನಿಖೆಗೆ ಒತ್ತಾಯ.
ಹೆಬ್ರಿ ಡೈರಿಗೆ ಕಳೆದ 40 ವರ್ಷಗಳಿಂದ ಮೀಸಲಿಟ್ಟ ಹುಲ್ಲುಗಾವಲು ಜಮೀನು ಪರಭಾರೆಯಾಗುತ್ತಿದ್ದು ಹಾಲು ಉತ್ಪಾದಕರ ಒಕ್ಕೂಟ ಮತ್ತು ಮುಂಬರುವ ನೂತನ ಆಡಳಿತ ಮಂಡಳಿಯು ತನಿಖೆ ನಡೆಸುವಂತೆ ನೀರೆ ಕೃಷ್ಣ ಶೆಟ್ಟಿ ಒತ್ತಾಯಿಸಿದರು. ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಭೂತುಗುಂಡಿ ಕರುಣಾಕರ ಶೆಟ್ಟಿ, ನಿರ್ದೇಶಕ ನವೀನ್ ಕೆ.ಅಡ್ಯಂತಾಯ, ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯರಾದ ಹೆಚ್.ಬಿ.ಸುರೇಶ್, ಎಚ್.ಜನಾರ್ಧನ್, ಸಂತೋಷ ನಾಯಕ್, ಡೈರಿ ಚುನಾವಣೆಗೆ ಸ್ಪರ್ಧಿಸಿದ್ದ ಸಂತೋಷ ಹೆಗ್ಡೆ, ಶೀನ ಪೂಜಾರಿ, ಬಾಲಕೃಷ್ಣ ಶೆಟ್ಟಿ, ಗುಲಾಬಿ ನಾಯ್ಕ್, ಜಯಶ್ರೀ ಶೆಟ್ಟಿ ಉಪಸ್ಥಿತರಿದ್ದರು.