
ಕಾರ್ಕಳ : ಕುಡಿಯುವ ನೀರಿನ ಅಭಾವ; ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರಿಬ್ಬರಿಂದ ಧರಣಿ
ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ಸರಿಯಾಗಿ ನೀರು ವಿತರಣೆಯಾಗದೇ ಇರುವ ಹಿನ್ನಲೆಯಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರಿಬ್ಬರು ಪ್ರತಿಭಟನೆ ನಡೆಸಿದ್ದಾರೆ.
ಕಾರ್ಕಳ ಪುರಸಭೆ ವ್ಯಾಪ್ತಿಯ 2 ಮತ್ತು 5ನೇ ವಾರ್ಡಿನ ಸಮಸ್ಯೆಯ ಬಗ್ಗೆ ಪ್ರತಿಮಾ ರಾಣೆ ಮತ್ತು ನೀತಾ ಆಚಾರ್ಯ ಅವರು ಮುಖ್ಯಾಧಿಕಾರಿ ಕಚೇರಿಯ ಮುಂದೆ ಪ್ರತಿಭಟನೆಗೆ ಕುಳಿತ ದೃಶ್ಯ ಕಂಡು ಬಂತು. ಭಾರಿ ಮಳೆ ಸುರಿದರೂ ಕುಡಿಯುವ ನೀರಿನ ಕೊರತೆ ಪುರಸಭೆಗೆ ಕಾಡಿದೆ. ಕಳೆದ 15 ದಿನಗಳಿಂದ ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಇದಕ್ಕೆ ಕಾರಣ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪುರಸಭೆ ಎಂಜಿನಿಯರ್ ರೇಣುಕಾ, ಮಳೆ ಸುರಿಯಲು ಆರಂಭಗೊಂಡಂದಿನಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯದ ಪರಿಣಾಮ ನೀರು ವಿತರಣೆಗೆ ಭಾರಿ ತೊಂದರೆಯಾಗಿದೆ ಎಂದು ಪುರಸಭೆ ಎಂಜಿನಿಯರ್ ರೇಣುಕಾ ತಿಳಿಸಿ ದರು.
ನೀರಿನ ಸಮಸ್ಯೆ ಸರಿಪಡಿಸಿ ನ್ಯಾಯ ಒದಗಿಸದಿದ್ದಲ್ಲಿ ಸಾರ್ವಜನಿಕರ ಜತೆ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ನಡೆಸುವುದಾಗಿ ಪ್ರತಿಮಾ ರಾಣೆ ಎಚ್ಚರಿಸಿದರು. ನೀರು ಸರಬರಾಜು ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದರೆ ನೀರು ವಿತರಕರಿಂದ ಸಮರ್ಪಕ ಉತ್ತರವಿಲ್ಲ. ಟ್ಯಾಂಕಿಗೆ ನೀರು ಸರಬರಾಜು ಆಗುತ್ತಿಲ್ಲ ಎಂದು ಉತ್ತರಿಸಿ ಸುಮ್ಮನಾಗುತ್ತಾರೆ. ವಾರ್ಡಿನ ಜನತೆಯ ಸಮಸ್ಯೆಯನ್ನು ಪರಿಹರಿಸುವವರು ಯಾರು ಎಂದು ನೀತಾ ಆಚಾರ್ಯ ಪ್ರಶ್ನಿಸಿದರು.












