ಪ್ರಜ್ವಲ್ ರೇವಣ್ಣ ವಿರುದ್ಧದ ಮೈಸೂರಿನ ಕೆ. ಆರ್. ನಗರ ಮಹಿಳೆ ಮೇಲೆ ಅತ್ಯಾಚಾರ ಆರೋಪ ಪ್ರಕರಣದ ವಾದ ಮಂಡನೆ ಪೂರ್ಣವಾಗಿದೆ. ಜು. 30 ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಪ್ರಕರಣದ ತೀರ್ಪು ಪ್ರಕಟಿಸಲಿದೆ.
ಅತ್ಯಾಚಾರ ಆರೋಪ ಪ್ರಕರಣದ ವಾದ ಮಂಡನೆ ಪೂರ್ಣಗೊಂಡಿದೆ. ಪ್ರಾಸಿಕ್ಯೂಷನ್ ಪರ ಎಸ್.ಪಿಪಿ ಬಿ. ಎನ್. ಜಗದೀಶ್, ಅಶೋಕ್ ನಾಯ್ಕ್ ವಾದ ಮಂಡಿಸಿದ್ದಾರೆ. 26 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ. 180 ದಾಖಲೆಗಳನ್ನು ಗುರುತಿಸಲಾಗಿದೆ. ವಾದ ಪ್ರತಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಆದೇಶವನ್ನು ಕಾದಿರಿಸಿದ್ದು, ಜು.30 ರಂದು ತೀರ್ಪು ಪ್ರಕಟಿಸಲಿದೆ. ಕೆ. ಆರ್. ನಗರದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಇವರ ಪತ್ನಿ ಭವಾನಿ ರೇವಣ್ಣ ಸಹಿತ ಒಟ್ಟು ಒಂಬತ್ತು ಆರೋಪಿಗಳಿದ್ದು, ರೇವಣ್ಣ ಹಾಗೂ ಭವಾನಿ ರೇವಣ್ಣಗೆ ಜಾಮೀನು ಸಿಕ್ಕಿದೆ. ಪ್ರಜ್ವಲ್ ರೇವಣ್ಣ ಒಂದು ವರ್ಷದಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹದಲ್ಲಿದ್ದಾನೆ.