ಪರಶುರಾಮ ಪ್ರತಿಮೆ ಸ್ಥಾಪನೆಗೆ ಆಗ್ರಹಿಸಿ ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದು ಅತ್ಯಂತ ಹಾಸ್ಯಾಸ್ಪದ ಸಂಗತಿಯಾಗಿದ್ದು, ಕೊಲೆಗಾರ ಶಾಂತಿಮಂತ್ರ ಪಠಿಸಿದಂತಾಗಿದೆ. ಪರಶುರಾಮ ಥೀಂ ಪಾರ್ಕ್ ಬಗ್ಗೆ ಇಲ್ಲಸಲ್ಲದ ಅಪಸ್ವರ ಎತ್ತಿ ಯೋಜನೆಯ ಅನುಷ್ಠಾನ ವಿಳಂಬವಾಗುವುದಕ್ಕೆ ಹಾಗೂ ಪ್ರವಾಸೋದ್ಯಮ ಕುಂಟಿತಗೊಳ್ಳುವುದಕ್ಕೆ ಉದಯಕುಮಾರ್ ಶೆಟ್ಟಿಯವರ ರಾಜಕೀಯ ಅವಕಾಶವಾದಿತನವೇ ಕಾರಣವಾಗಿದ್ದು, ಕಾರ್ಕಳದ ಜನತೆ ಈ ದ್ರೋಹವನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು BJP ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಗುಡುಗಿದ್ದಾರೆ. .
ಪ್ರತಿಮೆ ವಿಚಾರದಲ್ಲಿ ದಾಖಲಾಗಿದ್ದ ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿ ಕಾರ್ಕಳ ನ್ಯಾಯಾಲಯದಲ್ಲಿ ಸಲ್ಲಿಸಿದ ಆರೋಪಪಟ್ಟಿ ಉದಯಕುಮಾರ್ ಶೆಟ್ಟಿ ಇದುವರೆಗೆ ಮಾಡಿಕೊಂಡು ಬಂದಿದ್ದ ಟೂಲ್ ಕಿಟ್ ರಾಜಕಾರಣವನ್ನು ಬಟಾಬಯಲು ಮಾಡಿದೆ. ಪೈಬರ್ ಪ್ರತಿಮೆ ಎಂಬ ಉದಯಕುಮಾರ್ ಶೆಟ್ಟಿ ಆರೋಪ ಶುದ್ಧಸುಳ್ಳು ಎಂಬುದು ಸಾಬೀತಾಗುತ್ತಿದ್ದಂತೆ ಉದಯಕುಮಾರ್ ಶೆಟ್ಟಿ ಈಗ ಸಾರ್ವಜನಿಕ ಹಿತಾಸಕ್ತಿಯ ನಾಟಕ ಪ್ರಾರಂಭಿಸಿದ್ದಾರೆ.
ಪರಶುರಾಮ ಪ್ರತಿಮೆ ಹಾಗೂ ಥೀಂ ಪಾರ್ಕ್ ವಿಚಾರದಲ್ಲಿ ಶಾಶಕ ಸುನೀಲ್ ಕುಮಾರ್ ಅವರ ನಿಲುವು ಪ್ರಾರಂಭದಿಂದಲೂ ಸ್ಥಿರವಾಗಿಯೇ ಇದೆ. ಪ್ರಾರಂಭದಿಂದಲೂ ಯೋಜನೆಗೆ ಹಣ ಬಿಡುಗಡೆ ಮಾಡಿ ಪ್ರವಾಸೋದ್ಯಮಕ್ಕೆ ಮುಕ್ತಗೊಳಿಸಿ ಎಂದೇ ಅವರು ಆಗ್ರಹಿಸುತ್ತಿದ್ದಾರೆ. ಆದರೆ ಉದಯಕುಮಾರ್ ಶೆಟ್ಟಿ ಪದೇ ಪದೇ ನಿಲುವು ಬದಲಾಯಿಸಿದ್ದಾರೆ. ಪ್ರಕರಣ ದಾಖಲಿಸಿದ್ದು, ಪ್ರತಿಭಟನೆ ನಡೆಸಿದ್ದು, ನ್ಯಾಯಾಲಯದ ಮೆಟ್ಟಿಲೇರಿದ್ದೆಲ್ಲ ಆದ ಮೇಲೆ ಈಗ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿರುವುದೂ ಅನುಮಾನಾಸ್ಪದ ನಡೆಯೇ ಆಗಿದೆ.
ಪರಶುರಾಮ ಪ್ರತಿಮೆ ಸ್ಥಾಪನೆಯಾಗಬೇಕೆಂದು ಉದಯಕುಮಾರ್ ಶೆಟ್ಟಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಉದ್ದೇಶ ಶುದ್ದಿಯ ಬಗ್ಗೆ ಹಲವು ಅನುಮಾನಗಳಿವೆ. ಇವರಿಗೆ ಬೇಕಿರುವುದು ಪ್ರತಿಮೆಯೂ ಅಲ್ಲ, ಪ್ರವಾಸೋದ್ಯಮವೂ ಅಲ್ಲ. ರಾಜಕೀಯ ಲಾಭ ಹಾಗೂ ಮುಖ ಉಳಿಸಿಕೊಳ್ಳುವ ಪ್ತಯತ್ನ ಮಾತ್ರ ಇದರ ಹಿಂದೆ ಇದೆ.
ಪೈಬರ್ ಪ್ರತಿಮೆ ಎಂದು ಅಪಪ್ರಚಾರ ಮಾಡಿದ ಉದಯಕುಮಾರ್ ಶೆಟ್ಟಿ ಗ್ಯಾಂಗ್ ಥೀಂ ಪಾರ್ಕ್ ಗೆ ಕಳೆದ ಎರಡು ವರ್ಷದಿಂದ ನಯ್ಯಾಪೈಸೆ ಹಣ ಬಿಡುಗಡೆಯಾಗುವುದಕ್ಕೆ ಬಿಟ್ಟಿಲ್ಲ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಧಕ್ಕೆಯಾಗಿರುವುದು ಮಾತ್ರವಲ್ಲ ಕರಾವಳಿ ಜನರ ನಂಬಿಕೆಯ ಮೇಲೂ ಗದಾಪ್ರಹಾರ ಉಂಟಾಗಿದೆ.
ಈ ಪ್ರತಿಮೆ ನಿರ್ಮಾಣ ಕಾರ್ಯ ಮುಂದಿನ ಚುನಾವಣೆಯವರೆಗೂ ಹೀಗೆ ಸ್ಥಗಿತವಾಗಿರಬೇಕು.ಇದೊಂದು ಚುನಾವಣಾ ಸರಕಾಗಬೇಕೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಮೂಲಕ ಹೇಳಿಕೆ ಕೊಡಿಸಿದ್ದ ಉದಯಕುಮಾರ್ ಶೆಟ್ಟಿ ಈಗ ಇದ್ದಕ್ಕಿದ್ದಂತೆ ಪ್ರತಿಮೆ ಪರ ನಿಲ್ಲುತ್ತಾರೆಂದರೆ ನಂಬಲು ಸಾಧ್ಯವೇ ? ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಹಿಂದೆ ಕಾರ್ಕಳ ಕಾಂಗ್ರೆಸ್ ಮುಖಂಡರ ಹಿತಾಸಕ್ತಿ ಅಡಕವಾಗಿದ್ದು ಇಂಥ ಅವಕಾಶವಾದಿ ರಾಜಕಾರಣವನ್ನು ಪ್ರಜ್ಞಾವಂತ ಜನತೆ ಯಾವ ಮುಲಾಜು ಇಲ್ಲದೇ ತಿರಸ್ಕರಿಸುತ್ತಾರೆಂಬ ನಂಬಿಕೆ ಇದೆ. ಪ್ರತಿಮೆ ಹಾಗೂ ಯೋಜನೆ ವಿಚಾರದಲ್ಲಿ ಅಪಪ್ರಚಾರ ನಡೆಸಿದ ಉದಯಕುಮಾರ್ ಶೆಟ್ಟಿ ಹಾಗೂ ಆತನ ಪಟಾಲಂ ವಿರುದ್ಧ ಸುಳ್ಳು ಸುದ್ದಿ ಹಾಗೂ ದ್ವೇಷ ಹಂಚಿಕೆಯ ಪ್ರಕರಣ ದಾಖಲಿಸಿ ಕಾಂಗ್ರೆಸ್ ಸರ್ಕಾರ ಜೈಲಿಗಟ್ಟಬೇಕೆಂದು ಸಾರ್ವಜನಿಕರ ಆಗ್ರಹ. ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.