ಸಹಕಾರದ ಕೃತಜ್ಞತೆ ಸಲ್ಲಿಸಿದ ಪೌರಕಾರ್ಮಿಕರು
ಕಾರ್ಕಳ:ನಗರದ ಸ್ವಚ್ಛತೆಯ ಜತೆಗೆ ಜನತೆಯ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪೌರಕಾರ್ಮಿಕರ ಸೇವೆಯೇ ಮಹತ್ವ ಪಡೆಯುತ್ತದೆ. ಅಂತಹ ಪೌರಕಾರ್ಮಿಕರು ತಮ್ಮ ಸೇವಾವಧಿಯಲ್ಲಿ ಸಹಕರಿಸಿದವರನ್ನು ಕೂಡಾ ಮರೆಯುವುದಿಲ್ಲ ಎನ್ನುವುದು ಕೂಡಾ ಪ್ರಾಮುಖ್ಯತೆ ಪಡೆದಿದೆ. ಅದಕ್ಕೆ ಸಾಕ್ಷಿ ಈ ಕಾರ್ಯಕ್ರಮ.
ವಿವಿಧ ಪುರಸಭೆಗಳಲ್ಲಿ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿ ಪ್ರಸ್ತುತ ಬಂಟ್ವಾಳದಲ್ಲಿ ನಿವೃತ್ತರಾದ ಗೋಪಾಲಕೃಷ್ಣ ಶೆಟ್ಟಿ ಅವರು ಮೂಲತಃ ಕಾರ್ಕಳದವರು. ಅವರು ಕಾರ್ಕಳ ಪುರಸಭೆಯಲ್ಲಿ ಸರಕಾರಿ ಸೇವೆಗೆ ಸೇರ್ಪಡೆಯಾಗಿ, ಕಂದಾಯ ನಿರೀಕ್ಷಕರಾಗಿ ಮುಂದೆ ನಾಲ್ಕೂವರೆ ವರ್ಷಗಳ ಕಾಲ ಮುಖ್ಯಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
2009ರಿಂದ 2013ರವರೆಗೆ ಮುಖ್ಯಾಧಿಕಾರಿಯಾಗಿ ಸಲ್ಲಿಸಿದ ಸೇವಾವಧಿಯಲ್ಲಿ ಪೌರಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸಹಕರಿಸಿರುವುದನ್ನು ನೆನಪಿಸಿದ ಪೌರಕಾರ್ಮಿಕರು, ಗುರುವಾರ ಮನೆಗೆ ತೆರಳಿ ಅಭಿನಂದಿಸಿ ನಿವೃತ್ತಿಜೀವನ ಸುಗಮವಾಗಲಿ ಎಂದು ಹಾರೈಸಿದರು. ಪೌರಕಾರ್ಮಿಕರ ಸನ್ಮಾನಕ್ಕಿಂತ ಅವರು ತೋರಿದ ಪ್ರೀತಿಗೆ ಅಭಾರಿ ಎಂದು ನಿವೃತ್ತ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.