ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜು, ನಿಟ್ಟೆಯಲ್ಲಿ ಸಂಶೋಧನೆ ಮತ್ತು ಸಂಶೋಧನಾ ಪ್ರಕಟಣೆಯ ಪರಿಣಾಮಕಾರಿ ವಿಧಾನಗಳ ಕುರಿತು ಕಾರ್ಯಗಾರ
ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಡಾ.ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮದರ್ಜೆ ಕಾಲೇಜು , ನಿಟ್ಟೆ ಕಾರ್ಕಳ ಇಲ್ಲಿ ದಿನಾಕ 21-12-2023 ಮತ್ತು 22-12-2023 ರಂದು ಎರೆಡು ದಿನಗಳ ಕಾಲ ಸಂಶೋಧನೆ ಮತ್ತು ಸಂಶೋಧನಾ ಪ್ರಕಟಣೆಗಳ ಪರಿಣಾಮಕಾರಿ ವಿಧಾನಗಳ ಕುರಿತು ಕಾರ್ಯಗಾರವನ್ನು ಬೋಧಕರುಮತ್ತು ಸಂಶೋಧನಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ.ವೀಣಾ ಕುಮಾರಿ ಬಿ.ಕೆ. ತಿಳಿಸಿದರು.
ದಿನಾಂಕ 21-12-2023 ಬೆಳಿಗ್ಗೆ 9.30 ಕ್ಕೆ ಈ ಕಾರ್ಯಗಾರದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ವಿದ್ಯಾಲಯದ ಪ್ರಾಂಶುಪಾಲರಾದ ಡಾ.ನಿರಂಜನ್ ಎನ್ ಚಿಪ್ಳೋಂಕರ್ ಉದ್ಘಾಟಕರಾಗಿ ಭಾಗವಹಿಸಲಿದ್ದಾರೆ. ಹಾಗೆಯೇ ಜಸ್ಟೀಸ್ ಕೆ.ಎಸ್.ಹೆಗ್ಡೆ ನಿರ್ವಹಣಾ ಅಧ್ಯಯನ ಸಂಸ್ಥೆಯ ನಿರ್ಧೇಶಕರಾದ ಡಾ.ಗುರುರಾಜ್.ಎಚ್.ಕಿದಿಯೂರು ಅವರು ದಿಕ್ಸೂಚಿ ಭಾಷಣವನ್ನು ಮಾಡಲಿರುವರು.
ಇತ್ತೀಚಿಗೆ ಶಿಕ್ಷಣ ಸಂಸ್ಥೆಗಳು ಪರಿಣಾಮಕಾರಿ ಬೋಧನೆಗೆ ಹೆಚ್ಚು ಒತ್ತುಕೊಡುತ್ತಿದ್ದು ಬೋಧಕರನ್ನು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಹೆಚ್ಚು ಪ್ರೋತ್ಸಾಹವನ್ನು ನೀಡುತ್ತಿವೆ. ಆದರೆ ಬೋಧನೆಯ ಜೊತೆಯಲ್ಲಿ ಸಂಶೋಧನೆ ಅನೇಕ ಸವಾಲುಗಳನ್ನು ಅಪೇಕ್ಷಿಸುತ್ತದೆ, ಈ ಹಿನ್ನಲೆಯಲ್ಲಿ ಬೋಧನೆಯ ಜೊತೆಜೊತೆಗೆ ಪರಿಣಾಮಕಾರಿಯಾಗಿ ಸಂಶೋಧನೆಯಲ್ಲಿ ತೊಡಗಿಕೊಳ್ಳಲು ಇರುವ ಸಾಧ್ಯತೆಗಳ ಕುರಿತು ಮಾರ್ಗದರ್ಶನವನ್ನು ನೀಡುವ ಉದ್ದೇಶ ಈ ಕಾರ್ಯಗಾರದ್ದು.
ಈ ಹಿನ್ನಲೆಯಲ್ಲಿ ಎರೆಡು ದಿನಗಳ ಕಾಲ ನಡೆಯುವ ವಿವಿಧ ಗೋಷ್ಠಿಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ಕ್ಷೇತ್ರಗಳ ತಜ್ಞರಾದ ಡಾ.ಪ್ರವೀಣ ಕುಮಾರ್ ಶೆಟ್ಟಿ, ಡಾ.ನಂದನ್ ಪ್ರಭು, ಡಾ.ಸುಪ್ರಭ ಕೆ.ಆರ್ , ಡಾ. ಟಿ.ಪಿ.ಎಮ್.ಪಕಳ, ಡಾ.ಸುಚರಿತಾ, ಡಾ.ಅನಿರ್ಬನ್ ಚಕ್ರವರ್ತಿ ಪಾಲ್ಗೊಳ್ಳಲಿದ್ದಾರೆ ಹಾಗೂ ಸಂಶೋಧನೆಯ ಸವಾಲುಗಳು ಮತ್ತು ಪರಿಣಾಮಕಾರಿ ಸಂಶೋಧನಾ ಪ್ರಕಟಣೆಗಳ ಕುರಿತು ಹೊಸ ತಲೆಮಾರಿನ ಬೋಧಕರು ಮತ್ತು ಸಂಶೋಧಕರಿಗೆ ಮಾರ್ಗದರ್ಶನವನ್ನು ನೀಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದರು. ಡಾ. ರಾಘವೆಂದ್ರ ರಾವ್ ಕಾರ್ಯಗಾರದ ಸಂಯೋಜಕರು ಉಪಸ್ಥಿತರಿದ್ದರು.