ಕೆ.ಧರ್ಮಣ ಕೋಟ್ಯಾನ್ ಒಂದು ನೆನಪು…
ಕಾಂತಾವರ ಗ್ರಾಮದ ಪಡುಮರಕಡ ದಿ. ಬಾಬು ಪೂಜಾರಿಯವರ ಹಾಗೂ ದಿ.ವೀರಮ್ಮ ದಂಪತಿಗಳ ಪ್ರಥಮ ಪುತ್ರರಾಗಿ ಜನಿಸಿದ ತಾವು ತಮ್ಮ ಶಿಕ್ಷಣವನ್ನು ಕಾಂತಾವರ ಅನುದಾನಿತ ಶಾಲೆಯಲ್ಲಿ ಪೂರೈಸಿದ್ದೀರಿ.
ತಮ್ಮ ತಂದೆಯವರು ನಡೆಸುತ್ತಿದ್ದ ಕೃಷಿ ಚಟುವಟಿಕೆಯೊಂದಿಗೆ ಗ್ರಾಮದಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ, ಕ್ರೀಡೆ ಹೀಗೆ ಹತ್ತು ಹಲವು ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದೀರಿ.
1965ರಲ್ಲಿ ಸ್ಥಾಪನೆಯಾದ ಕಾಂತಾವರ ರೈತ ಯುವಕ ವೃಂದದ ಸಕ್ರಿಯ ಸದಸ್ಯರಾಗಿ ಹಾಗು ಅಧ್ಯಕ್ಷರಾಗಿ 1975ರಲ್ಲಿ ದಶಮಾನೋತ್ಸವ ವಿಜೃಂಭಣೆಯಿಂದ ಜರಗುವಂತೆ ಶ್ರಮಿಸಿದ್ದೀರಿ.
1969ರಲ್ಲಿ ಸ್ವಜಾತಿ ಬಾಂಧವರಿಗಾಗಿ ಡಿ. ಕೆ. ಶಿವರಾವ್ ರವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸೇವಾ ಸಂಘ ಸ್ಥಾಪನೆಯೊಂದಿಗೆ ಸ್ವಜಾತಿ ಪ್ರೇಮ ಮೆರೆದಿದ್ದೀರಿ.
ಕಾಲ ಕ್ರಮೇಣ ಸಂಘವು ನಿಷ್ಕ್ರಿಯಗೊಂಡಾಗ ಪುನಃ 1984ರಲ್ಲಿ ಶ್ರೀ ಕ್ಷೇತ್ರ ಕಾಂತಾವರದ ಧರ್ಮದರ್ಶಿಗಳ ಅಪೇಕ್ಷೆಯಂತೆ ಸಂಘವನ್ನು ಪುನಸ್ಚೇತನಗೊಳಿಸಿ, ಸಂಘದ ಅಧ್ಯಕ್ಷರಾಗಿ 1985ರಲ್ಲಿ ನಡೆದ ಕಾಂತೇಶ್ವರ ದೇವರ ಬ್ರಹ್ಮಕಲಶದಲ್ಲಿ ಸ್ಥಳೀಯ ಯುವಕರಲ್ಲಿ ಒಗ್ಗಟ್ಟು ಮೂಡಿಸಲು ರಾಮಾಂಜನೇಯ ವ್ಯಾಯಾಮ ಶಾಲೆಯನ್ನು ಕೊಳಕೆಬೈಲು ಶ್ರೀ ಸುಂದರ ಕೋಟ್ಯಾನ್ ರವರ ಗುರುಸ್ಥಾನದಲ್ಲಿ ಮುನ್ನಡಿಸಿದ ಕೀರ್ತಿ ತಮಗಿದೆ.
ತಾನು ಕಲಿತ ಶಾಲೆಯಲ್ಲಿ 1972 ರಲ್ಲಿ ಡಿ. ಕೆ. ಶಿವರಾವ್ ರವರ ಮುತುವರ್ಜಿಯಲ್ಲಿ ದಸರಾ ಹಬ್ಬ ಪ್ರಾರಂಭಗೊಂಡಾಗ ಕನ್ನಡ ನಾಟಕ, ತುಳು ನಾಟಕ, ಯಕ್ಷಗಾನದಲ್ಲೂ ಬಣ್ಣ ಹಚ್ಚಿದ್ದೀರಿ.
1974-75ರಲ್ಲಿ ಕಾಂತಾವರ ದೇವಸ್ಥಾನದ ಹತ್ತಿರ ಇರುವ ಕೆಮ್ಮನಕ್ಕರು ಎಂಬ ಗದ್ದೆಯಲ್ಲಿ ಜೋಡುಕರೆ ಕಂಬಳ ನಿರ್ಮಿಸಿ ಸೂರ್ಯ ಚಂದ್ರ ಎಂಬ ಹೆಸರಿನ್ನು ಇತ್ತು ಊರಿನ ಎಲ್ಲ ವರ್ಗದ ಯುವ ಜನರೊಂದಿಗೆ ತಮ್ಮ ಮುಂದಾಳತ್ವದಲ್ಲಿ ಮುನ್ನಡೆಸಿದ್ದೀರಿ.
ನಡಿಲ್ಲ ಬರ್ಕೆ ಮನೆ ದಿ. ಪುಟ್ಟ ಪೂಜಾರಿಯೊಂದಿಗೆ ಸೇರಿ ಬ್ರಹ್ಮಶ್ರೀ ಮೂಗೇರ್ಕಳ ನೆಲ್ಲಿಬೆಟ್ಟು ಕ್ಷೇತ್ರದ ನೇಮವನ್ನು ಹಲವಾರು ವರ್ಷ ನಡೆಸಿದ್ದೀರಿ.
1979ರಲ್ಲಿ ಕಾಂತಾವರ ಅಂಬಲಪದವು ಗೋಳಿಕಟ್ಟೆ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೈವದ ನೇಮವು ಪ್ರಾರಂಭಗೊಂಡು 1980ರಲ್ಲಿ ಕಾರಣಾಂತರದಿಂದ ನಿಲ್ಲುವ ಹಂತಕ್ಕೆ ಬಂದಾಗ, ಯಾವುದೇ ಕಾರಣಕ್ಕೂ ಕೋಲವನ್ನು ನಿಲ್ಲಿಸುವುದು ಬೇಡ. ಯಾರಿಂದ ಯಾವುದೇ ತೊಂದರೆ ಬಂದರೂ ನಾನಿದ್ದೇನೆ. ಸುಮಾರು 15 ವರ್ಷ ಸ್ಥಳೀಯ ಯುವಕರ ಬೆನ್ನೆಲುಬಾಗಿ ನಿಂತು ದೈವದ ಸೇವೆಯನ್ನು ಮುಂದುವರೆಸಿದ ಹೆಗ್ಗಳಿಕೆ ನಿಮಗಿದೆ. ಈಗಾಗಲೆ 45 ವರ್ಷ ನೇಮೋತ್ಸವವು ಮುಂದುವರೆಸಿಕೊಂಡು ಇದೆ.
ಊರಿನ ಮಧ್ಯಮ ವರ್ಗದ ಜನರಿಗೆ ಯಾವುದೇ ಸಂದರ್ಭಕ್ಕೂ ತೊಂದರೆ ಬಂದಾಗ ಮೊದಲು ಕೇಳಿಬರುವ ಹೆಸರೇ ಧರ್ಮಣ ಕೋಟ್ಯಾನ್.ತನು, ಮನ, ಧನಗಳಿಂದ ಸಹಕರಿಸಿದ ತಾವು ಇನ್ನು ನೆನಪು ಮಾತ್ರ.
-ಅಭಿಮಾನಿ ಬಳಗ