Home Blog Page 18

ಬಜ್ಪೆ:ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ ಆರೋಪ; ಹಿ.ಜಾ.ವೇ ಮುಖಂಡ ಸಮಿತ್ ರಾಜ್ ವಿರುದ್ಧ ಪ್ರಕರಣ ದಾಖಲು

0

 

ಯುವತಿಯೋರ್ವಳನ್ನು ಅತ್ಯಾಚಾರಕ್ಕೆ‌ ಯತ್ನಿಸಿ ಆಕೆಯ ನಗ್ನ‌ ಫೊಟೊಗಳನ್ನು ಬಳಸಿ, ನಿರಂತರ ಲೈಂಗಿಕ ದೌರ್ಜನ್ಯ ಎಸಗಿರುವ ಮತ್ತು ಕೊಲೆ ಬೆದರಿಕೆ ಹಾಕಿರುವ ಕುರಿತು ಹಿಂದೂ ಜಾಗರಣ ವೇದಿಕೆ‌ ಮುಖಂಡ ಸಮಿತ್ ರಾಜ್ ವಿರುದ್ಧ ಬಜ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

ಇರುವೈಲು ಗ್ರಾಮದ ಯುವತಿಯೋರ್ವಳನ್ನು ಬೆದರಿಸಿ ಅತ್ಯಾಚಾರಕ್ಕೆ ಯತ್ನಿಸಿದಲ್ಲದೇ ಆಕೆಯ ಮೇಲೆ ನಿರಂತರ ಲೈಂಗಿಕ‌ ದೌರ್ಜನ್ಯವೆಸಗಿ ಫೊಟೊ ಇರುವುದಾಗಿ ಬೆದರಿಸುತ್ತಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾಳೆ.

ಸಂತ್ರಸ್ತೆಯ ಸಹೋದರನಿಗೆ 2 ವರ್ಷದ ಹಿಂದೆ ಬಜ್ಪೆಯಲ್ಲಿ ಅಪಘಾತವಾಗಿ ಮಂಗಳೂರಿನ ವಿನಯ್ ಆಸ್ಪತ್ರೆಯಲ್ಲಿದ್ದ ಸಂದರ್ಭ ಸಂತ್ರಸ್ತೆಯ ಮನೆಯ ಆರ್ಥಿಕ ಪರಿಸ್ಥಿತಿ ಮತ್ತು ಮನೆಯ ಪರಿಸ್ಥಿತಿಯನ್ನು ಆಸ್ಪತ್ರೆಗೆ ಬಂದಿದ್ದ ಓರ್ವ ವ್ಯಕ್ತಿ ಗಮನಿಸಿ ಮೂಡುಬಿದಿರೆ ಶಾಸಕ ಉಮನಾಥ ಕೋಟ್ಯಾನ್ ರವರ ಜೊತೆ ಒಳ್ಳೆಯ ಬಾಂಧವ್ಯ ಹೊಂದಿರುವ ಧರೆಗುಡ್ಡೆಯ ಸಮಿತ್ ರಾಜ್ ರವರ ಮೊಬೈಲ್ ನಂಬರ್ ಅನ್ನು ಕೊಟ್ಟು ಮಾತನಾಡಲು ಹೇಳಿದ್ದರು. ಅದರಂತೆ ಸಂತ್ರಸ್ತೆ ಆತನಿಗೆ ಫೋನ್ ಮಾಡಿ ಕಷ್ಟವನ್ನು ಹೇಳಿಕೊಂಡಿದ್ದಳು. ಬಳಿಕ ಮೂಡಬಿದ್ರೆ ಶಾಸಕರು ಆಸ್ಪತ್ರೆಗೆ ಬಂದು ಸಹಾಯ ಮಾಡಿದ್ದರು ಎಂದು‌ ತಿಳಿದು ಬಂದಿದೆ.

ಆ ಬಳಿಕ ಆರೋಪಿ ಸಮಿತ್ ರಾಜ್ ಪದೇ ಪದೇ ಸಂತ್ರಸ್ತೆಯ ಮೊಬೈಲ್ ಫೋನ್ ಗೆ ಕರೆ ಮಾಡಿ ಒಳ್ಳೆಯ ರೀತಿಯಲ್ಲಿ ಮಾತನಾಡಿ ನಂತರ ಯುವತಿಯನ್ನು ಪ್ರೀತಿ ಮಾಡುತ್ತಿದ್ದು, ಮದುವೆಯಾಗುವುದಾಗಿ ಹೇಳಿದ್ದ. ಇದರಿಂದ ಹೆದರಿದ ಯುವತಿ ಮನೆಯಲ್ಲಿ ಮಾತನಾಡುವಂತೆ ತಿಳಿಸಿದ್ದಳು ಎಂದು ಹೇಳಲಾಗಿದೆ.

ಈ ಕುರಿತು ಆರೋಪಿ ಸಮಿತ್ ರಾಜ್ ನೊಂದಿಗೆ ಮಾತನಾಡಿದ್ದ ಆಕೆಯ ತಾಯಿ ಸಣ್ಣ ವಯಸ್ಸಿಗೆ ಮದುವೆ ಮಾಡಿಸುವುದಿಲ್ಲ‌ ಎಂದು ಹೇಳಿದ್ದರು ಎನ್ನಲಾಗಿದೆ.

ಇದಾದ ಬಳಿಕವೂ ಆರೋಪಿಯು ಯುವತಿಗೆ ನಿರಂತರ ಫೊನ್‌ಕರೆಗಳನ್ನು ಮಾಡುತ್ತಿದ್ದು, ಕರೆ ಸ್ವೀಕರಿಸದಿದ್ದಾಗ ಕಾಲೇಜಿನ ಬಳಿ ಮತ್ತು ಮನೆ ಬಳಿ ಬರುವುದಾಗಿ ಬೆದರಿಸುತ್ತಿದ್ದ. ಹೀಗಾಗಿ ಆತನ ಒತ್ತಡಕ್ಕೆ ಮಣಿದು ಆತನೊಂದಿಗೆ ಇಷ್ಟ ಇಲ್ಲದಿದ್ದರೂ ಮಾತನಾಡುತ್ತಿದೆ ಎಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾಳೆ ಎಂದು ತಿಳಿದು ಬಂದಿದೆ.

2023ರ ಮಾರ್ಚ್ 23ರಂದು ಕಾಲೇಜು ಬಿಟ್ಟು ಮನೆಗೆ ಬರುತ್ತಿದ್ದ ವೇಳೆ‌ ಆರೋಪಿಯು ಕಾರಿನಲ್ಲಿ ಬಂದು ಆಕೆಯನ್ನು ಕರೆದೊಯ್ದು, ಬಜ್ಪೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಬಲಾತ್ಕಾರವಾಗಿ ಬಟ್ಟೆ ಬಿಚ್ಚಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದ. ಈ ಸಂದರ್ಭ ಜೋರಾಗಿ ಬೊಬ್ಬೆ ಹೊಡೆದಾಗ ಬಾಯಿಗೆ ಕೈ ಅಡ್ಡ ಇಟ್ಟು, ಈ ವಿಚಾರ ಯಾರಲ್ಲಾದರೂ ಹೇಳಿದರೆ ಮನೆಗೆ ಬಂದು ನನ್ನನ್ನು ಮತ್ತು ನನ್ನ ಮನೆಯವರನ್ನು ಕೊಲೆ‌ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

ಆ ಬಳಿಕ ಯುವತಿಯನ್ನು ಹಲವು ಬಾರಿ ಆತ ಹೊರಗೆ ಹೋಗಲು ಕರೆದೊಯ್ದು, ಹೋಗಲು ಒಪ್ಪದೇ ಇದ್ದಾಗ ನನ್ನ ಆಶ್ಲೀಲ ಫೊಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಸಿದ್ದ.‌ ಅಲ್ಲದೆ, ನನ್ನ ನಗ್ನ ಫೊಟೊಗಳನ್ನೂ ಕಳುಹಿಸುವಂತೆ ಒತ್ತಾಯಿಸಿದ ಕಾರಣ ನಾನು ನಗ್ನ ಫೊಟೊಗಳನ್ನೂ ಕಳುಹಿಸಿದ್ದೆ ಎಂದು ಸಂತ್ರಸ್ತೆ ಯುವತಿ ದೂರಿನಲ್ಲಿ ಮಾಹಿತಿ ನೀಡಿದ್ದಾಳೆ ಎಂದು ತಿಳಿದು ಬಂದಿದೆ.

ಈ ಕುರಿತು ಯುವತಿ ನೀಡಿದ ದೂರಿನಂತೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ‌ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಮುದ್ರಾಡಿ ಸಮಸ್ತ ಬಿಲ್ಲವ ಸಮಾಜದ ಪರವಾಗಿ ಕಾರ್ಕಳ ಬಿಲ್ಲವ ಸಂಘದಿಂದ ಅಭಿನಂದನೆ

0

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಮುದ್ರಾಡಿ

ಸಮಸ್ತ ಬಿಲ್ಲವ ಸಮಾಜದ ಪರವಾಗಿ ಕಾರ್ಕಳ ಬಿಲ್ಲವ ಸಂಘದಿಂದ ಅಭಿನಂದನೆ

ಹೆಬ್ರಿ :ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ರಚನೆಯ ಬಹುದಿನಗಳ ಬೇಡಿಕೆಯನ್ನು ತಡವಾಗಿಯಾದರೂ ಸರಕಾರ ಈಡೇರಿಸಿರುವುದು ಸಂತಸದಾಯಕ. ನಿಗಮದ ಪ್ರಥಮ ಅಧ್ಯಕ್ಷ ಸ್ಥಾನವನ್ನು ಸಮುದಾಯ ಮತ್ತು ಸಮಾಜದ ಅಭಿವೃದ್ಧಿಗಾಗಿ‌ ಸದಾ ಹಾತೊರೆಯುವ ಪ್ರಬುದ್ಧ ನಾಯಕ ಮಂಜುನಾಥ ಪೂಜಾರಿ ಅವರಿಗೆ ನೀಡಿರುವುದು ಅಭಿನಂದನಾರ್ಹ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ಎಸ್‌ಎನ್‌ಜಿವಿ) ರಾಜ್ಯಾಧ್ಯಕ್ಷ ಸತ್ಯಜಿತ್‌ ಸುರತ್ಕಲ್ ಅಭಿಪ್ರಾಯಪಟ್ಟರು.

ಅವರು ಸೆ. 26ರಂದು ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ಪೂಜಾರಿ ಮುದ್ರಾಡಿ ಅವರನ್ನು ಸಮಸ್ತ ಬಿಲ್ಲವ ಸಮಾಜದ ಪರವಾಗಿ ಕಾರ್ಕಳ ಬಿಲ್ಲವ ಸಂಘದಿಂದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

500 ಕೋ. ರೂ. ಅನುದಾನ ಒದಗಿಸಲಿ
ಇಂದಿಗೂ ಅಭಿವೃದ್ಧಿ ನಿಗಮದ ಸಂಪೂರ್ಣ ರಚನೆಯಾಗಿಲ್ಲ. ಕೇವಲ ಆದೇಶ ಆಗಿದ್ದು, ಇದೀಗ ಅಧ್ಯಕ್ಷರ ನಿಯುಕ್ತಿಯಾಗಿದೆ. ಇನ್ನು ಕಂಪೆನಿ ಆಕ್ಟ್‌ನಡಿಯಲ್ಲಿ ರಿಜಿಸ್ಟ್ರೇಶನ್‌ ಆಗಿ ನಂತರ ಸರಕಾರದಿಂದ ಅನುದಾನ ಬಂದಾಗಲೇ ಅಭಿವೃದ್ಧಿ ನಿಗಮದ ರಚನೆ ಅರ್ಥಪೂರ್ಣವಾಗುತ್ತದೆ ಎಂದ ಸತ್ಯಜಿತ್‌ ಸುರತ್ಕಲ್ ಸಮುದಾಯದ ಸ್ವಾಮೀಜಿಗಳು, ಬ್ರಹ್ಮಾವರದ ಸಮಾವೇಶ, ಶಿವಮೊಗ್ಗದ ಸಮಾವೇಶ ಸೇರಿದಂತೆ ನಿಗಮಕ್ಕಾಗಿ ನಡೆದ ವಿವಿಧ ಹೋರಾಟಗಳ ಬೇಡಿಕೆಯಂತೆ ವರ್ಷಕ್ಕೆ ಕನಿಷ್ಠ 500 ಕೋ. ರೂ. ಅನುದಾನವನ್ನು ನಿಗಮಕ್ಕೆ ಒದಗಿಸಬೇಕು. ಹಾಗಾದಲ್ಲಿ ಮಾತ್ರ ಬಿಲ್ಲವ, ಈಡಿಗ, ದಿವಾರು, ನಾಮಧಾರಿ, ದೇವರ ಮಕ್ಕಳು ಸೇರಿದಂತೆ 26 ಪಂಗಡ ಶೈಕ್ಷಣಿಕವಾಗಿ ಆರ್ಥಿಕವಾಗಿ ಪ್ರಗತಿಯಾಗಲು ಸಾಧ್ಯ ಎಂದರು.

ಜಾತಿ ಗಣತಿಯಿಂದ ಹೊರಗುಳಿಯದೆ, ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ 26 ಪಂಗಡಗಳೂ ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡು, ಆರ್ಥಿಕ, ಸಾಮಾಜಿಕ ಸ್ಥಿತಿಗತಿಯನ್ನು ಮುಕ್ತವಾಗಿ ಹಂಚಿಕೊಂಡು ಮುಂದಿನ ದಿನಗಳಲ್ಲಿ ಅಭಿವೃದ್ಧಿ ನಿಗಮಕ್ಕೆ ಅನುದಾನ ಒದಗಿಸುವಲ್ಲಿ ಸಹಕರಿಸಿ ಎಂದು ಹೇಳಿದರು.

ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವೆ
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುನಾಥ್‌ ಪೂಜಾರಿ ಮುದ್ರಾಡಿ, ಅನೇಕ ಹೋರಾಟಗಳ ಫಲವಾಗಿ ಇಂದು ನಿಗಮ ರಚನೆಗೊಂಡಿದೆ. ನಿಗಮದ ಬಗ್ಗೆ ನಮ್ಮ ಸಮಾಜದ 26 ಪಂಗಡದವರು ಅನೇಕ ನಿರೀಕ್ಷೆಯನ್ನು ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.

ನಿಗಮದ ಮೂಲಕ ಸಮಾಜ ಸದೃಢವಾಗಲಿ – ಪ್ರಮಲ್‌ ಕುಮಾರ್
ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್‌ ಕುಮಾರ್‌ ಮಾತನಾಡಿ, ಬಿಲ್ಲವ ಸೇರಿದಂತೆ 26 ಪಂಗಡಗಳ ಕನಸು ಇಂದು ಜೀವ ಪಡೆದುಕೊಂಡಿದೆ. ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದಾಗ ಮಾತ್ರ ಸದೃಢವಾಗಲು ಸಾಧ್ಯ. ಇದಕ್ಕೆ ಸರಕಾರದ ಶಕ್ತಿ ಅವಶ್ಯ. ಈ ನಿಟ್ಟಿನಲ್ಲಿ ಸಮುದಾಯ ಮತ್ತು ಸಮಾಜದ ಅಭಿವೃದ್ಧಿಯಾಗಿ ಮಿಡಿಯುವ ಹಿರಿಯ ಮುಖಂಡ ಮಂಜುನಾಥ ಮುದ್ರಾಡಿಯವರಿಗೆ ನಿಗಮದ ಅಧ್ಯಕ್ಷ ಸ್ಥಾನ ಒದಗಿ ಬಂದಿರುವುದು ಶ್ಲಾಘನೀಯ. ನಿಗಮದ ಮೂಲಕ ಮಂಜುನಾಥ ಪೂಜಾರಿಯವರ ನೇತೃತ್ವದಲ್ಲಿ ಸಮುದಾಯ ಏಕೀಕರಣಗೊಂಡು ಬಲಿಷ್ಠಗೊಳ್ಳಲಿ ಎಂದು ಹೇಳಿದರು.

ಈ ಸಂದರ್ಭ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಉಪಾಧ್ಯಕ್ಷ ಅಚ್ಯುತ್ ಕಲ್ಮಾಡಿ, ಉಡುಪಿ ಜಿಲ್ಲಾ ಗೌರವಾಧ್ಯಕ್ಷ ರಾಜು ಪೂಜಾರಿ ಉಪ್ಪೂರು, ಜಿಲ್ಲಾಧ್ಯಕ್ಷ ಜಗನ್ನಾಥ ಕೋಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸನಿಲ್, ಉಡುಪಿ ತಾಲೂಕು ಅಧ್ಯಕ್ಷ ಶಶಿಧರ್ ಅಮೀನ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ಕರುಣಾಕರ ಪೂಜಾರಿ ಹಂದಾಡಿ, ಬ್ರಹ್ಮಾವರ ತಾಲೂಕು ಗೌರವ ಅಧ್ಯಕ್ಷ ಮಧುಸೂದನ್ ಹೇರೂರು, ಎಸ್‌ಎನ್‌ಜಿವಿ ರಾಜ್ಯ ಮಾಧ್ಯಮ ಸಾಮಾಜಿಕ ಜಾಲತಾಣ ಪ್ರಮುಖರಾದ ಸಂದೀಪ್ ಪಂಪುವೆಲ್, ಬಿಲ್ಲವ ಮಹಾಮಂಡಲದ ಕೋಶಾಧಿಕಾರಿ ಪ್ರಭಾಕರ ಬಂಗೇರ, ಸತೀಶ್ ಎಸ್. ಬಂಗೇರ, ಜಯಕರ್ ಕೊಡವೂರು, ಅಶೋಕ್‌ ಸುವರ್ಣ, ಸುಭಾಶ್‌ ಸುವರ್ಣ, ರಘುನಾಥ್‌ ಕೆ. ಎಸ್.‌, ಅಕ್ಷಯ್‌ ಬಂಗೇರ, ರತ್ನಾಕರ್‌ ಅಮೀನ್‌ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

 

ನಿಟ್ಟೆ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ಸ್ಮೃತಿ ಕೆ ಶೆಟ್ಟಿ ಕುಂಟಾಡಿ ರಾಜ್ಯ ಮಟ್ಟಕ್ಕೆ ಆಯ್ಕೆ

0

 

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಸೈಂಟ್ ಮೇರಿಸ್ ಪದವಿಪೂರ್ವ ಕಾಲೇಜು ಶಿರ್ವ ಇವರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಫುಟ್ಬಾಲ್ ಪಂದ್ಯಾಟದಲ್ಲಿ ಡಾ.ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜು, ನಿಟ್ಟೆಯ ವಿದ್ಯಾರ್ಥಿನಿ ಸ್ಮೃತಿ ಕೆ ಶೆಟ್ಟಿ ಕಾರ್ಕಳ ತಾಲೂಕು ತಂಡವನ್ನು ಪ್ರತಿನಿಧಿಸಿ, ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿನಿಯ ಸಾಧನೆಗೆ ಆಡಳಿತ ಮಂಡಳಿ, ಬೋಧಕ-ಬೋಧಕೇತರ ವರ್ಗ ಅಭಿನಂದಿಸಿದ್ದಾರೆ.

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮುದ್ರಾಡಿ ಮಂಜುನಾಥ ಪೂಜಾರಿ ನೇಮಕ.

0

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮುದ್ರಾಡಿ ಮಂಜುನಾಥ ಪೂಜಾರಿ ನೇಮಕ.

ಬೆಂಗಳೂರು : ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾಂಗ್ರೆಸ್ ನಾಯಕ ಮುದ್ರಾಡಿ ಮಂಜುನಾಥ ಪೂಜಾರಿ ಅವರನ್ನು ಕಾಂಗ್ರೇಸ್ ಪಕ್ಷ ನೇಮಕ ಮಾಡಿದೆ.

ಯುವ ಕಾಂಗ್ರೆಸ್ ಮೂಲಕ ಸಮಾಜಸೇವೆ, ರಾಜಕೀಯ ಪ್ರವೇಶ ಮಾಡಿದ ಮಂಜುನಾಥ ಪೂಜಾರಿ ಅವರು ಮುದ್ರಾಡಿ ಗ್ರಾಮ ಪಂಚಾಯತಿ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಬಳಿಕ ಕಾರ್ಕಳ ತಾಲ್ಲೂಕು ಪಂಚಾಯತಿ ಸದಸ್ಯರಾಗಿದ್ದರು.

ಉಡುಪಿ ಜಿಲ್ಲಾ ಪಂಚಾಯತಿಯ ಹೆಬ್ರಿ ಕ್ಷೇತ್ರದ ಸದಸ್ಯರಾಗಿ ಸೇವೆ ಸಲ್ಲಿಸಿದರು. ಜನಪರ ಹೋರಾಟಗಾರರಾದ ಮುದ್ರಾಡಿ ಮಂಜುನಾಥ ಪೂಜಾರಿ ನಿರಂತರವಾಗಿ ಜನಸೇವೆಯಲ್ಲಿ ಸಕ್ರೀಯರಾಗಿದ್ದಾರೆ.ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಹಾಗೂ ಸಂಘಸಂಸ್ಥೆಗಳಲ್ಲಿ ಮುಖ್ಯಸ್ಥರಾಗಿ ಸೇವೆಸಲ್ಲಿಸುತ್ತ ಸಕ್ರೀಯರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಾರ್ಕಳ ಕ್ಷೇತ್ರದ ಟಿಕೇಟ್ ಗಾಗಿ ಪ್ರಬಲ ಆಕಾಂಕ್ಷಿಯಾಗಿದ್ದರು.

ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸಿದ್ದಾರೆ. ಮುದ್ರಾಡಿಯಲ್ಲಿ ಶ್ರೀ ಗುರುರಕ್ಷಾ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರೀ ಗುರುರಕ್ಷಾ ಸೌಹಾರ್ದ ಸಹಕಾರಿ ಸಂಘವನ್ನು ಸ್ಥಾಪಿಸಿ ಜನಸೇವೆಯಲ್ಲಿ ಸಕ್ರೀಯರಾಗಿದ್ದಾರೆ. ಸಂಸ್ಥೆಯನ್ನು ಸ್ಥಾಪಿಸಿ ಮುದ್ರಾಡಿ ದಸರಾ ಹೆಸರಿನಲ್ಲಿ ನವರಾತ್ರಿ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸುತ್ತ ಬಂದಿದ್ದಾರೆ.

 

ಅ.1 -2 ರಂದು ಮೂರನೇ ವರ್ಷದ ಬಜೆಗೋಳಿ ದಸರಾ

0

 

ನಾಡಹಬ್ಬ ದಸರಾ ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಊರ-ಪರವೂರ ದಾನಿಗಳ ಸಹಕಾರದಿಂದ ಈ ಬಾರಿಯೂ 3ನೇ ವರ್ಷದ ಬಜೆಗೋಳಿ ದಸರಾ ಸಾರ್ವಜನಿಕ ಶಾರದಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ.

ಬಜೆಗೋಳಿ ಪಂಚಾಯತ್ ಮೈದಾನದಲ್ಲಿ, ರಾಜೇಶ್ ಪೂಜಾರಿ ಕರಿಯಾಲು ಇವರ ಅಧ್ಯಕ್ಷತೆಯಲ್ಲಿ ವೇದಮೂರ್ತಿ ಎಂ. ರಾಮ್ ಭಟ್ ನೇತೃತ್ವದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಅ.1 ರಿಂದ 2 ರವರೆಗೆ ನಡೆಯಲಿದೆ.

ಕನ್ನಡದ ಕಾದಂಬರಿಕಾರ ಎಸ್‌.ಎಲ್‌ ಭೈರಪ್ಪ ಇನ್ನಿಲ್ಲ

0

 

ಕನ್ನಡದ ಖ್ಯಾತ ಕಾದಂಬರಿಕಾರ, ಚಿಂತಕ, ಸರಸ್ವತಿ ಸಮ್ಮಾನ್‌ ಪುರಸ್ಕೃತ ಸಾಹಿತಿ ಎಸ್‌ ಎಲ್‌ ಭೈರಪ್ಪ ಅವರು ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಅಲ್ಪಕಾಲದ ಅಸೌಖ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಹಾಸನ ಜಿಲ್ಲೆಯ ಸಂತೇಶಿವರದಲ್ಲಿ ಜನಿಸಿದ್ದ ಅವರು ತಮ್ಮ ಕೃತಿಗಳ ಮೂಲಕ ಕನ್ನಡದ ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ ಆಧುನಿಕ ಕನ್ನಡ ಸಾಹಿತ್ಯದ ಕಾದಂಬರಿಕಾರರು ಮತ್ತು ಲೇಖಕರು. ಕನ್ನಡ ಭಾಷೆಯಲ್ಲಿ ಪುಸ್ತಕಗಳನ್ನು ಬರೆದಿರುವ ಇವರ ಕೃತಿಗಳು ಇಂಗ್ಲೀಷ್ ಹಾಗೂ ಭಾರತೀಯ ಭಾಷೆಗಳಿಗೆ ಅನುವಾದಗೊಂಡು ಭಾರತದ ಸಾಹಿತ್ಯವಲಯದಲ್ಲಿ ಹೆಸರಾಗಿದ್ದಾರೆ. ಇವರ ಕಾದಂಬರಿಗಳು ಹಲವಾರು ಮರುಮುದ್ರಣಗಳನ್ನು ಕಂಡು ಕನ್ನಡದ ಜನಪ್ರಿಯ ಬರಹಗಾರರಾಗಿದ್ದಾರೆ.ಇವರಿಗೆ ಭಾರತ ಸರ್ಕಾರವು 2023ನೇ ಸಾಲಿನಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಕಾರ್ಕಳ : ನವರಾತ್ರಿ ಪ್ರಯುಕ್ತ ನ್ಯೂ ಪವನ್ ಜ್ಯುವೆಲ್ಲರ್ಸ್ ನಲ್ಲಿ ವಿಶೇಷ ರಿಯಾಯಿತಿ

0

 

ನವರಾತ್ರಿ ಹಬ್ಬದ ಪ್ರಯುಕ್ತ ಸ್ವರ್ಣ ಪ್ರಿಯರಿಗೆ ಕಾರ್ಕಳದ ನ್ಯೂ ಪವನ್ ಜ್ಯುವೆಲ್ಲರ್ಸ್ ಈ ಬಾರಿ ವಿಶೇಷ ರಿಯಾಯಿತಿ ನೀಡುತ್ತಿದೆ.

ಪ್ರತಿ ಗ್ರಾಂ ಚಿನ್ನಾಭರಣ ಖರೀದಿಯಲ್ಲಿ ಸುಮಾರು 250 ರೂ. ಹಾಗೂ ವಜ್ರಾಭರಣದ ಪ್ರತಿ ಕ್ಯಾರೆಟ್ ಖರೀದಿಗೆ 7000 ರೂ. ರಿಯಾಯಿತಿ ಸಿಗಲಿದೆ.

ಈ ಕೊಡುಗೆ ಸೆ.22 ರಿಂದ 30 ರ ವರೆಗೆ ಇರಲಿದ್ದು, ಈ ವರ್ಷದ ನವರಾತ್ರಿಯನ್ನು ಸ್ವರ್ಣಾಭರಣದೊಂದಿಗೆ ಆಚರಿಸಲು ಇಂದೇ ಭೇಟಿ ಕೊಡಿ ನ್ಯೂ ಪವನ್ ಜ್ಯುವೆಲ್ಲರ್ಸ್, ಅನಂತ ಶಯನ ರಸ್ತೆ, ಕಾರ್ಕಳ.

ಕ್ರೈಸ್ಟ್ ಕಿಂಗ್: ರಾಷ್ಟ್ರೀಯ ಹಿಂದಿ ದಿನಾಚರಣೆ

0

ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು.

ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಸಹಾಯಕ ಹಿಂದಿ ಪ್ರಾಧ್ಯಾಪಕಿ ಡಾ. ದೇವಕಿ ಪ್ರಸನ್ನ ಜಿ ಎಸ್ ಅವರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ಎಲ್ಲಾ ಭಾಷೆಗಳಿಗೆ ತಮ್ಮದೇ ಆದ ಮಹತ್ವವಿದೆ. ಭಾಷೆಗಳಲ್ಲಿ ಪರಿಪೂರ್ಣತೆಯಿದ್ದರೆ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಹಿಂದಿ ಭಾಷೆಯಲ್ಲಿ ಪಾಂಡಿತ್ಯವಿದ್ದರೆ ಭಾರತ ದರ್ಶನ ಮಾಡಿಕೊಳ್ಳಬಹುದು” ಎಂದು ಹೇಳಿ ಹಿಂದಿ ಭಾಷೆಯ ವ್ಯಾಕರಣ ವಿಶೇಷತೆಯ ಬಗ್ಗೆ ತಿಳಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್ ಅವರು ಮಾತನಾಡಿ “ಯಾವುದೇ ಭಾಷೆಯನ್ನು ಕಲಿತಾಗ ಜೀವನದಲ್ಲಿ ಅನಿವಾರ್ಯ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬರುತ್ತದೆ” ಎಂದು ಹೇಳಿದರು.

ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ, ಹಿಂದಿ ಉಪನ್ಯಾಸಕಿ ಶ್ರೀಮತಿ ಶಾಹಿನಾ ಬಾನು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿಂದಿ ಉಪನ್ಯಾಸಕಿ ಶ್ರೀಮತಿ ಶಮೀನಾ ಅಮೀರ್ ಪ್ರಸ್ತಾವನೆಗೈದರೆ ವಿದ್ಯಾರ್ಥಿ ಬ್ರೋವಿನ್ ಅಗೇರಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಸುದೀಕ್ಷಾ ಸ್ವಾಗತಿಸಿ ಸ್ಲೀಟಾ ಪ್ರೀಮಲ್ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿ ಶನ್ವಿತಾ ವಂದಿಸಿದರು.

ಬಾಸ್ಕೆಟ್ ಬಾಲ್:ಡಾ.ಎನ್.ಎಸ್.ಎ.ಎಂ. ಪದವಿಪೂರ್ವ ಕಾಲೇಜು, ನಿಟ್ಟೆಯ 6 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

0

 

ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಉಡುಪಿ ಜಿಲ್ಲೆ ಹಾಗೂ ಡಾ.ಎನ್.ಎಸ್.ಎ.ಎಂ. ಪದವಿಪೂರ್ವ ಕಾಲೇಜು, ನಿಟ್ಟೆ ಇವರ ಜಂಟಿ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಡಾ.ಎನ್.ಎಸ್.ಎ.ಎಂ. ಪದವಿಪೂರ್ವ ಕಾಲೇಜಿನ ಬಾಲಕರ ತಂಡವು ಕಾರ್ಕಳ ತಾಲೂಕು ತಂಡವನ್ನು ಪ್ರತಿನಿಧಿಸಿ, ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಾದ ಅಭಿಲಾಶ್ ಡಿ. ಅಲ್ಮೇಡಾ, ಅಗ್ರಜ್ ಸಿ. ಗೌಡ, ದಕ್ಷ ಎ. ಶೆಟ್ಟಿ, ಪ್ರಣೀತ್ ಎಸ್., ಪ್ರೀತಮ್ ಪಿ., ಶಿವ ಪಟೇಲ್ ಹೆಚ್.ಬಿ. ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಬೋಧಕ-ಬೋಧಕೇತರ ವರ್ಗದವರು ಅಭಿನಂದಿಸಿದ್ದಾರೆ.

ಕ್ರೈಸ್ಟ್ ಕಿಂಗ್: ರೋವರ್ಸ್ ಮತ್ತು ರೇಂಜರ್ಸ್ ಪುನಶ್ಚೇತನಾ ಕಾರ್ಯಾಗಾರ

0

 

ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಸದಸ್ಯರಿಗೆ ಒಂದು ದಿನದ ಪುನಶ್ಚೇತನಾ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಉಡುಪಿ ಜಿಲ್ಲಾ ಮುಖ್ಯ ಆಯುಕ್ತರಾದ ಜಯಕರ ಶೆಟ್ಟಿ ಇಂದ್ರಾಳಿ ಅವರು ದೀಪ ಬೆಳಗಿ ಕಾರ್ಯಾಗಾರಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ಪ್ರಕೃತಿ ಹಾಗೂ ಸಮಾಜದಿಂದ ಎಲ್ಲವನ್ನೂ ಪಡೆದುಕೊಳ್ಳುವ ನಾವು ತಿರುಗಿ ಏನು ಕೊಡುತ್ತೇವೆ ಎಂದು ಯೋಚಿಸಬೇಕು. ಹಿಂತಿರುಗಿ ಏನನ್ನಾದರೂ ನೀಡುವಲ್ಲಿ ಸ್ಕೌಟ್ ಗೈಡ್ಸ್ನಂತಹ ಸಂಸ್ಥೆಗಳು ನಮಗೆ ಅವಕಾಶ ಮಾಡಿಕೊಡುತ್ತವೆ. ರೋವರ್ಸ್ ಮತ್ತು ರೇಂಜರ್ಸ್ ಘಟಕಗಳು ಮಕ್ಕಳಲ್ಲಿ ಕೌಶಲ ವೃದ್ಧಿಸಿ ಧನಾತ್ಮಕ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗುತ್ತವೆ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಭಾರತ್ ಸ್ಕೌಟ್ಸ್ ಗೈಡ್ಸ್ನ ಉಡುಪಿ ಜಿಲ್ಲಾ ಮುಖ್ಯಸ್ಥರಾದ ಡಾ.ಗಣನಾಥ ಎಕ್ಕಾರು ಅವರು ಮಾತನಾಡಿ “ಸಮಾಜ ಸೇವೆ ನಮ್ಮ ಜೀವನದ ಅವಿಭಾಜ್ಯ ಭಾಗವಾಗಬೇಕು, ವಿದ್ಯಾರ್ಥಿಗಳು ಸೇವಾಭಾವನೆ ಬೆಳೆಸಿಕೊಂಡು ಸಮಾಜಮುಖಿ ವ್ಯಕ್ತಿಗಳಾಗಿ ಬೆಳೆಯಬೇಕು” ಎಂದು ಹೇಳಿದರು.

ಅತಿಥಿಗಳಾಗಿದ್ದ ಉಡುಪಿ ಜಿಲ್ಲಾ ಗೈಡ್ಸ್ ಆಯುಕ್ತರಾದ ಶ್ರೀಮತಿ ಜ್ಯೋತಿ ಪೈ ಅವರು ಮಾತನಾಡಿ “ಮಕ್ಕಳು ತಂದೆ-ತಾಯಿ, ಗುರುಗಳು ಹಾಗೂ ಜನ್ಮಭೂಮಿಯನ್ನು ಎಂದಿಗೂ ಮರೆಯಬಾರದು, ಗೈಡ್ಸ್ನಂತಹ ಸಂಸ್ಥೆಗಳು ನಮ್ಮನ್ನು ಪರೋಪಕಾರಿಗಳನ್ನಾಗಿ ಮಾಡುತ್ತವೆ. ಮಕ್ಕಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಬೇಕು” ಎಂದು ಹೇಳಿದರು.

ಇನ್ನೋರ್ವ ಅತಿಥಿ ಕಾರ್ಕಳ ಸ್ಥಳೀಯ ಸಂಸ್ಥೆಗಳ ಉಪಾಧ್ಯಕ್ಷೆ ಶ್ರೀಮತಿ ಸಾವಿತ್ರಿ ಮನೋಹರ್ ಅವರು ಸ್ಕೌಟ್ ಗೈಡ್ಸ್ ಗೀತೆಗಳ ಗಾಯನದ ಮೂಲಕ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಪ್ರಾಚಾರ್ಯ ಲಕ್ಷ್ಮಿನಾರಾಯಣ ಕಾಮತ್ ಅವರು ಮಾತನಾಡಿ “ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಯಾವುದಾದರೂ ಒಂದು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು, ಮೊಬೈಲ್ ಮತ್ತು ಸಾಮಾಜಿಕ ಜಾಲಾತಾಣಗಳ ಚಟಗಳಿಂದ ಹೊರಬರಲು ಹಾಗೂ ನಮ್ಮ ದೇಹವನ್ನು ಸದೃಢವಾಗಿಸಲು ರೋವರ್ಸ್ ಮತ್ತು ರೆಂಜರ್ಸ್ ಗಳಂತಹ ಚಟುವಟಿಕೆಗಳು ತುಂಬಾ ಸಹಕಾರಿ” ಎಂದು ಹೇಳಿದರು.

ಉಡುಪಿ ಜಿಲ್ಲಾ ಸ್ಕೌಟ್ಸ್ನ ಸಹಾಯಕ ಆಯುಕ್ತರಾದ ವಿತೇಶ್ ಕಾಂಚನ್ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಇಡೀ ದಿನದ ಪುನಶ್ಚೇತನಾ ಕಾರ್ಯಾಗಾರದ ತರಬೇತಿ ನಡೆಸಿಕೊಟ್ಟರು. ಸಂಸ್ಥೆಯ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಅರ್ಥಶಾಸ್ತ್ರ ಉಪನ್ಯಾಸಕಿ, ರೇಂಜರ್ ಲೀಡರ್ ಕು.ಅಭಿನಯ ಸ್ವಾಗತಿಸಿ ದೈಹಿಕ ಶಿಕ್ಷಣ ನಿರ್ದೇಶಕ, ರೋರ‍್ಸ್ ಸ್ಕೌಟ್ ಲೀಡರ್ ಕೃಷ್ಣಪ್ರಸಾದ್ ಪ್ರಸ್ತಾವನೆಗೈದರು. ಉಪನ್ಯಾಸಕ ಉಮೆಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.