Home Blog Page 5

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್: ರಸ್ತೆ ರಿಪೇರಿ ಅಬ್ಬನಡ್ಕದ ಯುವಕರಿಂದ ರಸ್ತೆ ರಿಪೇರಿ ಮಾಡುವ ಮೂಲಕ ಮರುಡಾಮರೀಕರಣಕ್ಕೆ ಆಗ್ರಹ

0

 

ನಿರಂತರ ತನ್ನದೇ ಆದ ವಿಶೇಷ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಪರಿಸರದಾದ್ಯಂತ ಮನೆ ಮಾತಾಗಿರುವ ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರೀ ಫ್ರೆಂಡ್ಸ್ ಕ್ಲಬ್‌ನ ವತಿಯಿಂದ ಸಂಘದ 26ನೇ ವರ್ಷಾಚರಣೆ ಅಂಗವಾಗಿ ಸ್ವಾತಂತ್ಯ ಹೋರಾಟಗಾರರು, ಭಾರತ ರತ್ನ ಸರ್ದಾರ್ ವಲ್ಲಭಭಾಯಿ ಪಟೇಲರ 150ನೇ ಜನ್ಮ ದಿನಾಚರಣೆ ಹಾಗೂ 70ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಅಬ್ಬನಡ್ಕ ರಸ್ತೆಯಲ್ಲಿ ಹಲವಾರು ಗುಂಡಿಗಳು ಬಿದ್ದು ವಾಹನ ಸವಾರರಿಗೆ ಸಂಚಾರಿಸಲು ಬಹಳಷ್ಟು ಕಷ್ಟವಾಗುತ್ತಿದ್ದನ್ನು ಮನಗಂಡ ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್‌ನ ಸದಸ್ಯರೆಲ್ಲರೂ ಕಾಯಕವೇ ಕೈಲಾಸವೆಂಬಂತೆ ಎಲ್ಲರೂ ಒಟ್ಟು ಸೇರಿ ರಸ್ತೆಯಲ್ಲಿರುವ ಗುಂಡಿಗಳಿಗೆ ಮಣ್ಣು ಹಾಕುವ ಕೆಲಸ ಕಾರ್ಯವನ್ನು ನಡೆಸಿದರು.

ಮೂರು ಗ್ರಾಮಕ್ಕೆ ಸಂಪರ್ಕದ ಕೊಂಡಿಯಾಗಿರುವ ಅಬ್ಬನಡ್ಕ ರಸ್ತೆ

ಕೆದಿಂಜೆಯಿಂದ ಬೋಳ ಹಾಗೂ ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸಂಪರ್ಕ ಪಡೆಯುವ ಅಬ್ಬನಡ್ಕ ರಸ್ತೆ ಇತ್ತೀಚೆಗೆ ತೀವ್ರ ಹದ್ದಗೆಟ್ಟಿದ್ದು, ಹೊಂಡಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಮಸ್ಯೆ ಸೃಷ್ಟಿಯಾಗಿದೆ. ಅಬ್ಬನಡ್ಕ ರಸ್ತೆ ನಂದಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿದ್ದು, ಹೊಂಡಗುಂಡಿಗಳ ಕೂಪದಿಂದಾಗಿ ವಾಹನದಿಂದ ಬಿದ್ದು ಅಪಘಾತಗಳು ನಡೆಯುತ್ತಲೇ ಇದೆ. ಮಳೆಗಾಲ ಸಂದರ್ಭದಲ್ಲಿ ಹೊಂಡಗಳಲ್ಲಿ ನೀರು ತುಂಬಿರುವುದರಿಂದ ರಸ್ತೆಯನ್ನು ಗುರುತಿಸಲು ವಾಹನ ಚಾಲಕರು ಹರಸಾಹಸ ಪಡವಂತಾಗಿದೆ.

ಈ ರಸ್ತೆಯಿಂದ ನಾಲ್ಕು ಗ್ರಾಮಕ್ಕೆ ಅನೂಕೂಲ
ಅಬ್ಬನಡ್ಕ ರಸ್ತೆಗೆ ಮರುಡಾಮರೀಕರಣವಾದರೆ ನಂದಳಿಕೆ, ಕೆದಿಂಜೆ, ಬೆಳ್ಮಣ್ಣು, ಬೋಳ ಹೀಗೆ ನಾಲ್ಕು ಗ್ರಾಮದ ಗಡಿ ಭಾಗದಲ್ಲಿ ಹಾದು ಹೋಗುತ್ತಿದ್ದು, ನಾಲ್ಕು ಗ್ರಾಮದ ಗ್ರಾಮಸ್ಥರಿಗೆ ತುಂಬಾ ಅನುಕೂಲಕರವಾಗಲಿದೆ. ಆದರೆ ಹೊಂಡ ಗುಂಡಿಗಳೇ ಅಧಿಕವಾಗಿರುವ ಈ ರಸ್ತೆಯಲ್ಲಿ ಸಂಚರಿಸಲು ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದು, ಅಪಘಾತ, ವಾಹನ ಸ್ಕೀಡ್ ಆಗುವ ಕುರಿತು ಭೀತಿ ಇದೆ.

ಹಲವು ಪ್ರಸಿದ್ಧ ದೇವಳಕ್ಕೆ ಹೋಗುವ ಪ್ರಮುಖ ರಸ್ತೆ
ಕೆದಿಂಜೆ ಮಂಜರಪಲ್ಕೆ ಮೂಲಕ ಇತಿಹಾಸ ಪ್ರಸಿದ್ಧ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಮುಂಡ್ಕೂರು ದೇವಸ್ಥಾನ, ಕಟೀಲು ದೇವಸ್ಥಾನ, ಕಜೆ ಮಾರಿಗುಡಿ, ಬೋಳ ಶ್ರೀ ರುದ್ರ ಸೋಮನಾಥೇಶ್ವರ ದೇವಾಲಯ, ಬೋಳ ವೀರ ಮಾರುತಿ ದೇವಸ್ಥಾನ, ಕೊಡ್ಯಡ್ಕ, ಕಡಂದಲೆ, ಸಚ್ಚೇರಿಪೇಟೆ, ಬೋಳ ಜೈನ ಬಸದಿ, ಬೋಳ ಡೋನ್ ಬೋಸ್ಕೋ ಚರ್ಚ್, ಬಜಪೆ ವಿಮಾನ ನಿಲ್ದಾಣಕ್ಕೂ ಪ್ರಮುಖ ಸಂಪರ್ಕ ರಸೆ ಇದಾಗಿದೆ. ಸಣ್ಣಪುಟ್ಟ ವಾಹನಗಳಲ್ಲಿ ಸಂಚರಿಸುವವರಿಗೆ ಈ ರಸ್ತೆ ನರಕಯಾತನೆ ನೀಡುತ್ತಿದೆ. ಹೊಂಡಗಳನ್ನು ಮುಚ್ಚಿ ರಸ್ತೆ ದುರಸ್ಥಿ ಮಾಡಿಕೊಡುವಂತೆ ಜನಪ್ರತಿನಿಧಿಗಳಲ್ಲಿ ಹಲವು ಬಾರಿ ಗ್ರಾಮಸ್ಥರು ಮನವಿ ಮಾಡಿಕೊಂಡರೂ ಈವರೆಗೆ ಪ್ರತಿಕ್ರಿಯೆ ಶೂನ್ಯ.

ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ
ಈ ಮಾರ್ಗದಲ್ಲಿ ಸರಕಾರಿ ಹಾಗೂ ಖಾಸಗಿ ಬಸ್ ಸೌಲಭ್ಯ ಇಲ್ಲದಿರುವುದರಿಂದ ಸ್ಥಳೀಯ ಗ್ರಾಮಗಳ ವಿದ್ಯಾರ್ಥಿಗಳು ಅನಿವಾರ್ಯವಾಗಿ ನಡೆದುಕೊಂಡೇ ಶಾಲಾ, ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಈ ಸಂದರ್ಭದಲ್ಲಿ ವಾಹನ ಸಂಚಾರದಿಂದ ಹೊಂಡಗಳಲ್ಲಿರುವ ಕೆಸರು ವಿದ್ಯಾರ್ಥಿಗಳ ಮೇಲೆ ಸಿಡಿಯುತ್ತಿದೆ. ವಿದ್ಯಾರ್ಥಿಗಳೂ ಈ ಕುರಿತು ತೀವ್ರ ಅಸಮಾಧಾನ ವ್ಯಕ್ರಪಡಿಸುತ್ತಿದ್ದಾರೆ.

ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ಸದಸ್ಯರಿಂದಲೇ ಶ್ರಮದಾನ ಗ್ರಾಮಸ್ಥರಿಂದ ಮೆಚ್ಚುಗೆ

ನಂದಳಿಕೆ-ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ (ರಿ.)ನ ಅಧ್ಯಕ್ಷ ಸುರೇಶ್ ಅಬ್ಬನಡ್ಕ ನೇತೃತ್ವದಲ್ಲಿ ನಡೆದ ಶ್ರಮದಾನ ಕಾರ್ಯಕ್ರಮದಲ್ಲಿ ಸಂಘದ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ನಿಕಟ ಪೂರ್ವಾಧ್ಯಕ್ಷರಾದ ದಿನೇಶ್ ಪೂಜಾರಿ ಬೀರೊಟ್ಟು, ಕಾರ್ಯದರ್ಶಿ ಸತೀಶ್ ಅಬ್ಬನಡ್ಕ, ಸದಸ್ಯರಾದ ಪದ್ಮಶ್ರೀ ಪೂಜಾರಿ, ಹರೀಶ್ ಪೂಜಾರಿ, ಪ್ರದೀಪ್ ಸುವರ್ಣ, ಯೋಗೀಶ್ ಆಚಾರ್ಯ, ಕಿರಣ್ ಬೋಳ, ಸುಭಾಸ್ ಕೆಮ್ಮಣ್ಣು, ಶ್ರೀಕಾಂತ್ ಆಚಾರ್ಯ, ಅಭೀಷೇಕ್ ಕುಲಾಲ್, ಅನ್ನಪೂರ್ಣ ಕಾಮತ್, ಅವಿನಾಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಅಬ್ಬನಡ್ಕ ಮಾರ್ಗದಲ್ಲಿ ಹೊಂಡಗಳದ್ದೇ ಸಂಖ್ಯೆ ಹೆಚ್ಚಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಅಬ್ಬನಡ್ಕ ರಸ್ತೆ ದುರಸ್ಥಿ ಬಗ್ಗೆ ಮನವಿ ನೀಡುತಿದ್ದರೂ ಅಧಿಕಾರಿಗಳು ಪೊಳ್ಳು ಭರವಸೆ ನೀಡುತಿದ್ದಾರೆಯೇ ಹೊರತು ದುರಸ್ಥಿಗೊಳಿಸುವತ್ತ ಆಸಕ್ತಿ ವಹಿಸುತಿಲ್ಲ. ದುರಸ್ಥಿ ಕಾರ್ಯ ಶೀಘ್ರವೇ ಆರಂಭಿಸದಿದ್ದರೆ ಗ್ರಾಮಸ್ಥರ ಜೊತೆಗೆ ಹೋರಾಟ ಮಾಡುತ್ತೇವೆ. ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತಲೇ ಇರುತ್ತವೆ. ರಸ್ತೆಗಳ ಹೊಂಡ ಮುಚ್ಚಿ ಮರುಡಾಮರೀಕರಣವನ್ನು ಅಧಿಕಾರಿಗಳು ಕೂಡಲೇ ಮಾಡುವಲ್ಲಿ ಮುತುವರ್ಜಿ ವಹಿಸಬೇಕಿದೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್ ನ ಅಧ್ಯಕ್ಷ ಸುರೇಶ ಅಬ್ಬನಡ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಗುಡ್ಡಗಾಡು ಓಟದ ಸ್ಪರ್ಧೆ : ಕಾರ್ಕಳ ಜ್ಞಾನಸುಧಾದ ಇಬ್ಬರು ರಾಜ್ಯಮಟ್ಟಕ್ಕೆ

0

 

ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಡಾ.ಎನ್.ಎಸ್.ಎ.ಎಂ ಪದವಿ ಪೂರ್ವ ಕಾಲೇಜು ನಿಟ್ಟೆ ಇವರ ಜಂಟಿ ಆಶ್ರಯದಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ಶ್ರೀಶಾಂತ್ ಕೆ ಮತ್ತು ದ್ವಿತೀಯ ಪಿಯುಸಿಯ ಪ್ರಜ್ವಲ್ ಎಸ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಾಧಕ ವಿದ್ಯಾರ್ಥಿಯನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ, ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.

ಮಣಿಪಾಲ ಜ್ಞಾನಸುಧಾದ ಪಾರ್ಥ ವಾಟರ್ ಪೋಲೊ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ

0

 

ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗ ಬಸವನಗುಡಿ ಬೆಂಗಳೂರಿನಲ್ಲಿಆಯೋಜಿಸಿದ ರಾಜ್ಯಮಟ್ಟದ ವಾಟರ್ ಪೋಲೊ ಸ್ಪರ್ಧೆಯಲ್ಲಿ ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು, ವಿದ್ಯಾ ನಗರದ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿ ಪಾರ್ಥ ಜೆ ಗೌಡ ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.

ಇವರು ಹಾಸನ ಜಿಲ್ಲೆಯ ಅರಸೀಕೆರೆಯ ದಾಸನಹಳ್ಳಿಯ ಡಿ.ಜೆ. ಜಗದೀಶ್ ಹಾಗೂ ಸುಜಾತ ಎಸ್.ಎಸ್. ದಂಪತಿಗಳ ಸುಪುತ್ರ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ. ಸುಧಾಕರ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರು, ಹಾಗೂ ಬೋಧಕ ಬೋಧಕೇತರ ವರ್ಗ ಅಭಿನಂದಿಸಿದ್ದಾರೆ.

ಮಣಿಪಾಲ ಜ್ಞಾನಸುಧಾದ ಚಿರಾಗ್ ಅಥ್ಲೆಟಿಕ್ಸ್ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

0

ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ವಿಭಾಗದಿಂದ ಅಜ್ಜರಕಾಡು ಮಹಾತ್ಮಾಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ನಲ್ಲಿ ಮಣಿಪಾಲ ಜ್ಞಾನಸುಧಾ ಪದವಿಪೂರ್ವ ಕಾಲೇಜು, ವಿದ್ಯಾ ನಗರದ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಚಿರಾಗ್ ಸಿ. ಪೂಜಾರಿ ಇವರು 100ಮೀ. ಹಾಗೂ 200 ಮೀ. ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿದ್ದಾರೆ.

ಇವರು ಹೆಬ್ರಿ ಸಂತೆಕಟ್ಟೆಯ ಚಂದ್ರ ಪೂಜಾರಿ ಹಾಗೂ ಜಯಲಕ್ಷ್ಮಿ ದಂಪತಿಗಳ ಸುಪುತ್ರ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರು, ಹಾಗೂ ಬೋಧಕ ಬೋಧಕೇತರ ವರ್ಗ ಅಭಿನಂದಿಸಿದ್ದಾರೆ.

ಕ್ರೈಸ್ಟ್ ಕಿಂಗ್: ರಾಜ್ಯಮಟ್ಟದ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಶ್ರಾವ್ಯ ಶೆಟ್ಟಿ ಹಾಗೂ ವರುಣ ಶೆಟ್ಟಿ ಪ್ರಥಮ ಸ್ಥಾನ

0

 

ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ರಾಮನಗರ ಜಿಲ್ಲೆ ಹಾಗೂ ಗ್ರಾಮಾಂತರ ಪ.ಪೂ ಕಾಲೇಜು, ಕನಕಪುರ ಇವರ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕಿಯರ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ತಂಡವನ್ನು ಪ್ರತಿನಿಧಿಸಿದ್ದ ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವರುಣ ಶೆಟ್ಟಿ ಹಾಗೂ ಪ್ರಥಮ ವಿಜ್ಞಾನ ವಿಭಾಗದ ಶ್ರಾವ್ಯ ಶೆಟ್ಟಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಮಣಿಪಾಲ ಜ್ಞಾನಸುಧಾ ವಿದ್ಯಾರ್ಥಿನಿ ನೈಜ ವಾಲಿಬಾಲ್ ನಲ್ಲಿ ರಾಷ್ಟ್ರಮಟ್ಟಕ್ಕೆ

0

ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ವತಿಯಿಂದ ರಾಮನಗರದಲ್ಲಿ ಅ.31 ಹಾಗೂ ನ.1 ರಂದು ನಡೆದ ರಾಜ್ಯಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಮಣಿಪಾಲ್ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ವಿದ್ಯಾನಗರದ ದ್ವಿತೀಯ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನೈಜ ಆರ್ ಹೆಗ್ಡೆ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕುಕ್ಕೆಹಳ್ಳಿ ರಾಜೇಶ್ ಹೆಗ್ಡೆ ಹಾಗೂ ಸಂಧ್ಯಾ ಕುಮಾರಿ ಶೆಟ್ಟಿಯವರ ಸುಪುತ್ರಿ.

ಸಾಧಕ ವಿದ್ಯಾರ್ಥಿನಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಸಂಸ್ಥೆಯ ಪ್ರಾಂಶುಪಾಲರು, ಹಾಗೂ ಬೋಧಕ ಬೋಧಕೇತರ ವರ್ಗ ಅಭಿನಂದಿಸಿದ್ದಾರೆ.

ನಿರೀಕ್ಷಿತಂ ಸಂದಾನಂ ಕಿರುಚಿತ್ರದ ಚಿತ್ರೀಕರಣ ಆರಂಭ

0

 

ನಿರೀಕ್ಷಿತಂ ಸಂದಾನಂ ಎಂಬ ನಾಮಾಂಕಿತದ ಕಿರುಚಿತ್ರ ಸದ್ಯದಲ್ಲೇ ಬಿಡುಗಡೆಗೊಳ್ಳಲಿದ್ದು, ಇದೀಗ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಡಾ. ಗಣನಾಥ ಶೆಟ್ಟಿ ಬಿ. ಅವರು ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ಕೊಟ್ಟಿದ್ದಾರೆ.

ಪ್ರವೀಣ್ ಜೆ.ಕೆ. ಅವರ ಕಥೆ ಹಾಗೂ ನಿರ್ದೇಶನದಲ್ಲಿ ಹಾಗೂ ರಾಜೇಶ್ ಬೊಂಬೆ, ಪ್ರಯಾಣ್ ಕ್ರಿಯೇಷನ್ಸ್ ರವರ ನಿರ್ಮಾಪಕತ್ವದಲ್ಲಿ ಮೂಡಿಬರಲಿರುವ ಕಿರುಚಿತ್ರದಲ್ಲಿ ಚಿತ್ರಗ್ರಹಣ ನಿರ್ದೇಶಕರಾಗಿ ಸಾಗರ್, ನಿರ್ದೇಶಕರಾಗಿ ಸಾತ್ವಿಕ್ ಶಂಕರ್ ಶೆಟ್ಟಿ ಮತ್ತು ನವೀಶ್ ಶೆಟ್ಟಿ ಕಾರ್ಯನಿರ್ವಹಿಸಲಿದ್ದಾರೆ.

ಅ. ೧೫ ರಂದು ಕ್ರಿಯೇಟಿವ್ ಮೀಡಿಯಾ ವತಿಯಿಂದ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸ್ಕ್ರಿಪ್ಟ್ ಪೂಜೆ ನಡೆದಿದ್ದು, ಪ್ರಮುಖ ನಟರಾಗಿ ಶಶಿ ಶಿರ್ಲಾಲ್, ರೂಪ ಶೆಟ್ಟಿ, ವಿನಾಯಕ್ ಕುಲಾಲ್ , ಹರಿ ನಿಟ್ಟೆ ರವರು ಬಣ್ಣ ಹಚ್ಚಲಿದ್ದಾರೆ.

ಚಿತ್ರೀಕರಣ ಮುಹೂರ್ತ ಕಾರ್ಯಕ್ರಮದಲ್ಲಿ ನಿರ್ದೇಶಕ ಪ್ರವೀಣ್ ಜೆ.ಕೆ., ಸಹ ನಿರ್ದೇಶಕರಾದ ಸಾತ್ವಿಕ್ ಶಂಕರ್ ಶೆಟ್ಟಿ ಮತ್ತು ನವೀಶ್ ಶೆಟ್ಟಿ, ಸುನಿಲ್ ಕಡ್ತಲ, ಚಿತ್ರಗ್ರಹಣ ನಿರ್ದೇಶಕ ಸಾಗರ್ ಮೊದಲಾದವು ಉಪಸ್ಥಿತರಿದ್ದರು.

 

ಕಾರ್ಕಳ: ಅಯೋಧ್ಯ ಬಲಿದಾನ್ ದಿವಸ್ ಪ್ರಯುಕ್ತ ರಕ್ತದಾನ ಶಿಬಿರ

0

 

ಬಜರಂಗದಳ ಕಾರ್ಕಳ ಪ್ರಖಂಡದ ವತಿಯಿಂದ ಅಯೋಧ್ಯ ಬಲಿದಾನ್ ದಿವಸ್ ಪ್ರಯುಕ್ತ ರಕ್ತದಾನ ಶಿಬಿರ ಬೈಪಾಸ್ ನ ಕಾರ್ಕಳ ಇನ್ ಸಭಾಂಗಣದಲ್ಲಿ ನಡೆಯಿತು.

ಶ್ರೀರಾಮ ಮಂದಿರಕ್ಕಾಗಿ ಹುತಾತ್ಮರಾದ ಧರ್ಮ ಯೋಧರಿಗೆ ರಕ್ತದಾನದ ಮೂಲಕ ಬಜರಂಗದಳದ ಕಾರ್ಯಕರ್ತರು ಗೌರವ ಸಮರ್ಪಿಸಿದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದ ಗಿರೀಶ್ ರಾವ್ ಕಾರ್ಯಕ್ರಮಕ್ಕೆ ಶುಭ ಹಾರೈಸಿ ಬಜರಂಗದಳದ ಕಾರ್ಯಚಟುವಟಿಕೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಉದ್ಯಮಿ ಅರುಣ್ ಕುಮಾರ್ ನಿಟ್ಟೆ ಹಾಗೂ ಅಶೋಕ್ ಸುವರ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ವಿಶ್ವ ಹಿಂದೂ ಪರಿಷದ್ ಪ್ರಾಂತ ಗೋ ರಕ್ಷಾ ಪ್ರಮುಖ್ ಸುನಿಲ್ ಕೆ ಆರ್ ಮಾತನಾಡಿ “ಅಯೋಧ್ಯೆ ಶ್ರೀರಾಮ ಮಂದಿರ ಇವತ್ತು ಅತ್ಯಂತ ಭವ್ಯವಾಗಿ ನಿರ್ಮಾಣಗೊಂಡಿರುವ ಕಾರಣ ಅವತ್ತು ನಮ್ಮ ಹಿಂದೂ ಸಮಾಜದ ತ್ಯಾಗ ಮತ್ತು ಬಲಿದಾನ. ರಾಮಜನ್ಮಭೂಮಿಗಾಗಿ ಅದೆಷ್ಟೋ ಕಾರ್ಯಕರ್ತರು ತಮ್ಮ ಪ್ರಾಣವನ್ನೇ ಅರ್ಪಿಸಿದರು. ಅಂತಹ ವೀರರನ್ನು ಹಿಂದೂ ಸಮಾಜ ಎಂದಿಗೂ ಮರೆಯಬಾರದು. ನವೆಂಬರ್ 2 ದೇಶಾದ್ಯಂತ ಬಜರಂಗದಳದ ಕಾರ್ಯಕರ್ತರು ಈ ಸಲುವಾಗಿ ರಕ್ತದಾನ ಮಾಡುವ ಮೂಲಕ ಸಮಾಜದ ಏಳಿಗೆಗೆ ಸದಾ ದುಡಿಯುತ್ತಿದ್ದಾರೆ” ಎಂದರು.

ಉಡುಪಿ ಜಿಲ್ಲಾ ಬಜರಂಗದಳ ಸಂಯೋಜಕ ಚೇತನ್ ಪೇರಲ್ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಜ್ಜರಕಾಡು ರಕ್ತನಿಧಿ ವಿಭಾಗದ ಡಾ. ವಿಸ್ಮಿತಾ ಉಪಸ್ಥಿತಿ ಇದ್ದರು. ಬಜರಂಗದಳ ಕಾರ್ಕಳ ತಾಲೂಕು ಸಂಯೋಜಕ ಮನೀಶ್ ನಿಟ್ಟೆ ವಂದಿಸಿ, ವಿಶ್ವ ಹಿಂದೂ ಪರಿಷದ್ ಸಹ ಕಾರ್ಯದರ್ಶಿ ಯಶೋಧರ ಪೇರಲ್ಕೆ ಕಾರ್ಯಕ್ರಮ ನಿರೂಪಿಸಿದರು.

ಮಣಿಪಾಲ ಜ್ಞಾನಸುಧಾ : ಎನ್.ಎಸ್.ಎಸ್. ಶಿಬಿರ ಸಮಾರೋಪ

0

ಸಮುದಾಯದ ಅನುಭವ ಶಿಕ್ಷಣ ಜೀವನಕ್ಕೆ ದಾರಿ ದೀಪ : ನರಸಿಂಗ ಶೆಟ್ಟಿ

ಸಮುದಾಯದ ಜೀವನದಲ್ಲಿ ಪಡೆಯುವ ಅನುಭವ ಶಿಕ್ಷಣ ನಿಜ ಜೀವನಕ್ಕೆ ದಾರಿ ದೀಪ. ವಿದ್ಯಾರ್ಥಿಗಳು ಪಠ್ಯ ಶಿಕ್ಷಣದ ಜೊತೆಗೆ ಭೌತಿಕ, ನೈತಿಕ, ನೈತಿಕ, ಸಾಮಾಜಿಕ ಆಧ್ಯಾತ್ಮಿಕ ಶಿಕ್ಷಣಗಳನ್ನು ಜೊತೆ ಜೊತೆಗೆ ಪಡೆಯುವಂತಾಗಬೇಕು. ನಿಸ್ವಾರ್ಥ ಸೇವಾ ಮನೋಭಾವನೆ ಬೆಳೆಸಿಕೊಂಡು ದೇಶದ ಏಳಿಗೆಗೆ ಸಹಕರಿಸುವ ಜವಾಬ್ದಾರಿಯುತ ಪ್ರಜೆಗಳಾಗುವತ್ತ ಸಾಗಬೇಕು ಎಂದು ಕುಕ್ಕೆಹಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ನರಸಿಂಗ ಶೆಟ್ಟಿ ನುಡಿದರು. ಅವರು ಪಿ.ಎಮ್.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕೆಹಳ್ಳಿಯಲ್ಲಿ ನಡೆದ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರು ಹಾಲಿ ಸದಸ್ಯ ಕಿರಣ್ ಕುಮಾರ್ ಹೆಗ್ಡೆ ಮಾತನಾಡಿ ನಮ್ಮ ಗ್ರಾಮದಲ್ಲಿ ಕಳೆದ ನೆನಪುಗಳನ್ನು ಇಲ್ಲಿ ಕಲಿತ ಜೀವನ ಪಾಠಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಪೆರ್ಡೂರು ಗುಡಿ ಕೈಗಾರಿಕೆಗಳ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುಲಾಲ್ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಿ, ಆ ಮೂಲಕ ಪರೋಪಕಾರ ನಿಮ್ಮ ಜೀವನದ ಭಾಗವಾಗಲಿ ಎಂದರು.

ಪಿ.ಎ.ಶ್ರೀ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಸಾದ್ ಹೆಗ್ಡೆ ಅವರು ಮಾತನಾಡಿ ಶಿಬಿರ ಸಂಪನ್ನವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿ ಶಿಬಿರಕ್ಕೆ ಸಹಕರಿಸಿದ ಎಲ್ಲರನ್ನು ವಂದಿಸಿದರು.

ಮಣಿಪಾಲ ಜ್ಞಾನಸುಧಾ ಪ.ಪೂ.ಕಾಲೇಜು, ವಿದ್ಯಾನಗರದ ಪ್ರಾಂಶುಪಾಲ ಗಣೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಮಾನ್ಯ ಹಳ್ಳಿಗಿಂತ ಹಲವಾರು ವೈಶಿಷ್ಟ್ಯಗಳನ್ನು ಹೊಂದಿರುವ ಕುಕ್ಕೆಹಳ್ಳಿಯ ಜನತೆ ಶಿಬಿರದ ವಿದ್ಯಾರ್ಥಿಗಳಿಗೆ ತೋರಿಸಿದ ಕಾಳಜಿಗೆ ವಂದಿಸಿದರು.

ಉಡುಪಿ ಜ್ಞಾನಸುಧಾ ಪ.ಪೂ.ಕಾಲೇಜು, ನಾಗಬನ ಕ್ಯಾಂಪಸ್ ನ ಪ್ರಾಂಶುಪಾಲ ಸಂತೋಷ್, ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಪಿ.ಆರ್.ಒ. ಜ್ಯೋತಿ ಪದ್ಮನಾಭ ಭಂಡಿ, ಉದ್ಯಮಿಗಳಾದ ಸುನಿಲ್ ಶೆಟ್ಟಿ, ಪಿ. ಎಮ್. ಶ್ರೀ. ಸ. ಹಿ. ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಸರಸ್ವತಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷ ರವೀಂದ್ರ ಕುಮಾರ್, ಎಸ್.ಡಿ.ಎಂ.ಸಿ. ಸದಸ್ಯರಾದ ಅಶ್ವಿನಿ ವಾದಿರಾಜ ಭಟ್ ಮತ್ತಿತರರು ಉಪಸ್ಥಿತರಿದ್ದರು.

ಶಿಬಿರದಲ್ಲಿ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು. ವಿದ್ಯಾರ್ಥಿಗಳಾದ ಸಮೀಕ್ಷಾ ಪೂಜಾರಿ, ರಕ್ಷಿತ್ ಶೆಟ್ಟಿ, ತನ್ವಿ ಎಸ್ ಆಚಾರ್ಯ, ರಂಜನ್ ಶೆಟ್ಟಿ ಉತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದರು. ಅಜೆಕಾರ್ ಪದ್ಮ ಗೋಪಾಲ ಎಜುಕೇಶನ್ ಟ್ರಸ್ಟ್ ನ ವತಿಯಿಂದ ಹೊತ್ತು ಸಾವಿರ ಹಾಗು ಜ್ಞಾನಸುಧಾ ಉಪನ್ಯಾಸಕ ಬಳಗದಿಂದ ಹತ್ತು ಸಾವಿರ ಆತಿಥೇಯ ಶಾಲೆಗೆ ಒಟ್ಟು ಇಪ್ಪತ್ತು ಸಾವಿರ ರೂಪಾಯಿಗಳ ದತ್ತಿ ನಿಧಿ ವಿತರಿಸಲಾಯಿತು. ಆಂಗ್ಲ ಭಾಷಾ ಉಪನ್ಯಾಸಕರಾದ ಶಮಿತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಹಾಗೂ ಉಪ ಪ್ರಾಂಶುಪಾಲರಾದ ರವಿ ಜಿ ಶಿಬಿರದ ವರದಿ ವಾಚಿಸಿ ವಂದಿಸಿದರು.

 

ಯುವ ಸಂಘಟಕ ನವೀನ್ ಎಮ್. ಪೂಜಾರಿ ಪಡು ಇನ್ನ ಅವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

0

 

ಅಜ್ಜರಕಾಡು ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಉಡುಪಿ ಜಿಲ್ಲಾಡಳಿತದ ವತಿಯಿಂದ ನ. 1ರ ಶನಿವಾರದಂದು ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಸಮಾಜ ಸೇವಕ ಕಲಾಪೋಷಕ ಸರಳ ಸಜ್ಜನ ಸಹೃದಯವಂತ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ವಿಜೇತ ನವೀನ್ ಪಡುಇನ್ನರವರ ಪರಿಚಯ ಬದುಕು ಒಂದು ರೀತಿಯಲ್ಲಿ ಅಪರಿಚಿತವಾದುದು, ಎಷ್ಟೇ ತಿಳಿದಿದ್ದರೂ ನಾಳೆಗೆ ಎಲ್ಲವೂ ಅದಲು ಬದಲು. ಬದುಕಿನ ಕನಸಿನ ಮೂಟೆ ಕಟ್ಟುವುದು ಬಹಳ ಸುಲಭ, ಆದರೆ ಅದನ್ನು ಹೊರುವುದು ಕಷ್ಟ ಎಂಬ ವಾಕ್ಯವನ್ನು ಸವಾಲುಗಳಾಗಿ ತೆಗೆದುಕೊಂಡು, ಬದುಕಿನ ಮಜಲುಗಳನ್ನು ದಾಟುವಾಗ ಅದರ ನಡುವೆ ಸಿಗುವ ಸವಾಲುಗಳಿಗೆ ಎದೆಯೊಡ್ಡಿ ನಿಂತು ಕಷ್ಟಗಳನ್ನು ಸ್ವೀಕರಿಸಿ ಅದಕ್ಕೆ ಸಾಧನೆಯ ಉತ್ತರವನ್ನು ನೀಡುವವನೇ ನಿಜವಾದ ಸಾಧಕ. ಅಂತಹ ಸಾಧಕರ ಸಾಲಿನಲ್ಲಿ ಮೊದಲಲ್ಲಿ ಮಿಂಚುತ್ತಿರುವವರು ನಮ್ಮ ಯುವ ಸಂಘಟಕ ನವೀನ್ ಪಡುಇನ್ನ.

ಸಾಧನೆ ಎನ್ನುವ ಸರಳವಾದ ಪದದಲ್ಲಿ ಸಾವಿರ ಕಷ್ಟಗಳಿರುತ್ತದೆ. ಕಷ್ಟದಲ್ಲಿ ನಿಷ್ಠೆ ಇದ್ದರೆ, ಮಾತಿನಲ್ಲಿ ಪ್ರತಿಷ್ಠೆ ಇದ್ದರೆ ಸೃಷ್ಟಿ ಕೂಡ ಸುಮ್ಮನಿರುವುದು. ನಿಮ್ಮ ಸಾಧನೆ ನೋಡುತ ಎನ್ನುವ ಮಾತಿನಂತೆ ಅವಮಾನದ ಮಾತುಗಳಿಗೆ ಕಿವಿಕೊಡದೆ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವವರು ಇವರು. ದೈವ ದೇವರುಗಳಿಗೆ ಹೆಸರುವಾಸಿಯಾದ, ಸರ್ವಧರ್ಮವನ್ನು ಗೌರವಿಸುವ ಬೆರ್ಮೆರೆ ಸೃಷ್ಟಿಯ ತುಳುನಾಡಿನ ಪಡು ಇನ್ನ ಗ್ರಾಮದಲ್ಲಿ ಮೋಹನದಾಸ್ ಮತ್ತು ಸುಜಾತ ದಂಪತಿಯ ಸುಪುತ್ರರಾಗಿ ದಿನಾಂಕ 11.08.1989 ರಲ್ಲಿ ನವೀನ್ ಪಡು ಇನ್ನಾರವರು ಜನಿಸಿದರು. ಇವರು ಹೃದಯಮಾತೆ ಕಮಲಜ್ಜಿಯ ಮಮತೆಯಲ್ಲಿ ಬಾಲ್ಯವನ್ನು ಕಳೆದರು. ಅಣ್ಣನಾದ ಕಿರಣ್ ಕುಮಾರ್, ತಂಗಿ ಪೂರ್ಣಿಮಾಳ ಸದಾ ಬೆಂಬಲದೊಂದಿಗೆ ಬೆಳೆದವರು. ಅತ್ತೆಯರಾದ ರೂಪಾ ಮತ್ತು ದಿವ್ಯಾರವರ ಪ್ರೀತಿಯಲ್ಲಿ ಬೆಳೆದರು. ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಪ್ರಾಥಮಿಕ ಶಾಲೆ ಇನ್ನಾ, ಪ್ರೌಢಶಿಕ್ಷಣವನ್ನು ಯಂ.ವಿ. ಶಾಸ್ತ್ರೀ ಹೈಸ್ಕೂಲ್ ಇನ್ನಾದಲ್ಲಿ ಪಡೆದು ಮುಂದೆ 10ನೇ ತರಗತಿಯನ್ನು ಮುಗಿಸಿ ಜೀವನದ ಬಂಡಿಯನ್ನು ಸಾಗಿಸಲು ಮುಂಬಯಿಯತ್ತ ಪಯಣ ಬೆಳೆಸಿದರು. ಮುಂಬಯಿಯಲ್ಲಿ ದಿನದ ಹೊತ್ತು ಕ್ಯಾಂಟೀನ್‌ನಲ್ಲಿ ಕೆಲಸ ಮಾಡಿ ರಾತ್ರಿ ಕನ್ನಡ ಭವನ ರಾತ್ರಿ ಶಾಲೆಯಲ್ಲಿ ವಿದ್ಯಾಭ್ಯಾಸವನ್ನು ನವೀನ್ ಇನ್ನಾರವರು ಮುಂದುವರಿಸಿದರು.

ಸಾಧನೆ ಸಾಧಕನ ಸೊತ್ತೆ ಹೊರತು ಸೋಮರಿಯದಲ್ಲ ಎಂಬ ಮಾತಿಗೆ ಸ್ಪೂರ್ತಿಯಾದ ಇವರು, ಹಗಲಲ್ಲಿ ಕ್ಯಾಂಟೀನ್ ಕಾರ್ಮಿಕನಾಗಿ ದುಡಿದು ಕನ್ನಡ ಭವನ ರಾತ್ರಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತ ಹೊಸತನದ ಬದುಕಿಗೆ ಮುನ್ನುಡಿಯಾಗಿರುವರು. ಇವರು ಮಾಡುವ ಕೆಲಸದಲ್ಲಿ ದೇವರನ್ನು ಕಾಣುತ್ತ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಕೆಲಸ ಮಾಡುತ್ತ ಅನ್ನಪೂರ್ಣ ಕ್ಯಾಟರರ್ಸ್ ಇದರ ಮಾಲಕರಾದ ಆನಂದ್ ಶ್ರೀಯಾನ್, ಸುರೇಶ್ ಶ್ರೀಯಾನ್ ಇವರ ಪ್ರೀತಿ ವಿಶ್ವಾಸ ಗಳಿಸುತ್ತ ಮುಂದೆ ಸಾಗಿದರು. ಮಾವಂದಿರಾದ ರಮೇಶ್ ಕೋಟ್ಯಾನ್, ಸುಧಾಕರ ಪೂಜಾರಿ ಮತ್ತು ಹರೀಶ್ ಕೋಟ್ಯಾನ್, ಚಿಕ್ಕಮ್ಮ ಸುನೀತಾ ಪೂಜಾರಿ ಇವರ ಸೂಕ್ತ ಸಲಹೆಗಳನ್ನು ತೆಗೆದುಕೊಂಡು ಮಾಯಾನಗರಿ ಮುಂಬೈನಲ್ಲಿ ಅದ್ವಿಕ್ ಪುಡ್ ಎಂಡ್ ಹಾಸ್ಪಿಟಲಿಟಿ ಸರ್ವಿಸ್, ಅದ್ವಿಕ್ ಫ್ರುಟ್ಸ್ & ವೆಜಿಟೇಬಲ್ ಉದ್ಯಮ ಸಂಸ್ಥೆಯನ್ನು ಆರಂಭಿಸಿ ಯಶಸ್ವಿ ಯುವ ಉದ್ಯಮಿ ಎಂದೆನಿಸಿಕೊಂಡರು.

ಇವರು ನಡೆದ ದಾರಿಯನ್ನು ಗಮನಿಸುವಾಗ ಅದೃಷ್ಟ ಎಂದರೆ ಅವಕಾಶ ಪಡೆಯುವವನು ಬುದ್ದಿವಂತ ಎಂದರೆ ಅವಕಾಶ ಸೃಷ್ಟಿಸುವವನು ಎಂಬ ವಿವೇಕಾನಂದರ ನುಡಿಯೊಂದು ನೆನಪಾಗುತ್ತದೆ. ಶಾಲಾ ಕಾಲೇಜು ದಿನಗಳಲ್ಲಿಯೇ ನಾಯಕತ್ವದ ಗುಣ ಮತ್ತು ಸಂಘಟನ ಚತುರತೆಯನ್ನು ಮೈಗೂಡಿಸಿಕೊಂಡ ಇವರು ಕ್ರೀಡಾ, ಸಾಮಾಜಿಕ ಹಾಗೂ ಕಲಾ ಕ್ಷೇತ್ರಗಳಲ್ಲಿನ ಸಾಧಕರನ್ನು ಒಗ್ಗೂಡಿಸಿಕೊಂಡು ಸಮರ್ಥ ಸಂಘಟಕರಾಗಿ ಬೆಳೆದವರು ಎನ್ನಲು ಖುಷಿಯಾಗುತ್ತದೆ. ಕಳೆದ ಇಪ್ಪತ್ತು ವರ್ಷಗಳಿಂದ ಉದಯೊನ್ಮುಖ ಪ್ರತಿಭೆಗಳಿಗೆ ವೇದಿಕೆಯನ್ನು ನಿರ್ಮಿಸಿಕೊಡುವ ಜೊತೆಗೆ ಸಮಾಜದ ಉತ್ತಮ ಸಾಧಕರನ್ನು ಗುರುತಿಸಿ ಸನ್ಮಾನಿಸಿ ಅವರ ಸಾಧನೆಯ ಗೌರವವನ್ನು ಹೆಚ್ಚಿಸಿದವರು ನವೀನ್ ಪಡು ಇನ್ನಾರವರು.
ಒಬ್ಬ ನಾಯಕ ಸಮರ್ಥನಾಗಿ ಬೆಳೆಯಬೇಕಾದರೆ, ಸಮಾಜದ ಉತ್ತಮ ಕಾರ್ಯಗಳು ನಡೆಯಬೇಕಾದರೆ ಒಂದು ಸಂಸ್ಥೆಯ ಅಗತ್ಯತೆ ಇದೆ ಎಂಬುದನ್ನು ಮನಗೊಂಡ ಇವರು ಅವರ ಪ್ರೀತಿಯ ಅಜ್ಜಿ ಕಮಲ ಪೂಜಾರ್ತಿಯವರ ಸ್ಮರಣೀಯವಾಗಿ ಕಮಲ ಕಲಾ ವೇದಿಕೆ ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಅದರ ರೂವಾರಿಯಾಗಿ ಆ ಸಂಸ್ಥೆಯನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿ ಮುಂಬೈ ನಗರದಲ್ಲಿ ಸೈ ಎನಿಸಿಕೊಂಡಿರುವರು. ಅದರ ಮೂಲಕ ಸಮಾಜಪರ ಕಾರ್ಯಗಳನ್ನು ನೆರವೇರಿಸುತ್ತಾ ಸುಮಾರು ನೂರಕ್ಕೂ ಹೆಚ್ಚು ಕಲಾವಿದರನ್ನು ಸತ್ಕರಿಸಿ ಗೌರವಿಸಿದ ಕೀರ್ತಿ ಇವರಿಗಿದೆ. ಕೊರೋನ ಸಮಯದಲ್ಲಿ ಅಂತಾರಾಷ್ಟ್ರೀಯ ವಾಸ್ತು ತಜ್ಞರಾದ ಅಶೋಕ್ ಪೊರೋಹಿತ್ ರವರ ಆಶೀರ್ವಾದ, ಸಹಕಾರದ ಜೊತೆಗೆ ಇವರ ಗೆಳೆಯರ ಸಹಕಾರದಿಂದ ಕಮಲಾ ಕಲಾ ವೇದಿಕೆ ಸಂಸ್ಥೆಯ ಮೂಲಕ 400 ಮನೆಗಳಿಗೆ ಆಹಾರ ಕಿಟ್ ವಿತರಣೆ ಮಾಡಿ ಬಡವರ ಕಣ್ಣೀರು ಒರೆಸಿದವರು ನವೀನ್ ಪಡು ಇನ್ನಾ. ಸುಮಾರು ಮುನ್ನೂರಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿರುವರು.

ಆರೋಗ್ಯ ಶಿಕ್ಷಣ ಮತ್ತು ಕಲಾ ಸೇವೆಗೆ ತನ್ನ ಕೈಯಿಂದ ಆಗುವಷ್ಟು ಮತ್ತು ಇತರರ ಜೊತೆಗೂಡಿ ಮಾಡುವ ಸಹಾಯ ಅನನ್ಯ. ಶಿವಾಯ ಫೌಂಡೇಶನ್ ಇದರ ಗೌರವ ಸಲಹೆಗಾರರಾಗಿ, ಶ್ರೀ ಕೃಷ್ಣವಿಠ್ಠಲ ಪ್ರತಿಷ್ಠಾನ ಮುಂಬಯಿ ಇದರ ಜೊತೆ ಕಾರ್ಯದರ್ಶಿಯಾಗಿ, ರಂಗ ಮಿಲನ ಮುಂಬಯಿ ಇದರ ಉಪಾಧ್ಯಕ್ಷರಾಗಿ, ಶ್ರೀ ಗೆಜ್ಜೆಗಿರಿ ಯಕ್ಷಗಾನ ಮಂಡಳಿಯ ಮುಂಬಯಿ ವ್ಯವಸ್ಥಾಪಕರಾಗಿ, ನಮ್ಮ ಕಲಾವಿದರು ಬೆದ್ರ ತಂಡ ಮುಂಬಯಿ ಇದರ ಸಂಚಾಲಕರಾಗಿ, ಶ್ರೀ ನಾರಾಯಣ ಗುರು ಭಕ್ತ ವೃಂದ ಇನ್ನ ಇದರ ಮುಂಬಯಿ ಸಮಿತಿಯ ಕಾರ್ಯದರ್ಶಿಯಾಗಿ, ಇನ್ನ ಹಿತವರ್ಧಕ ಸಂಘ ಮುಂಬಯಿ ಇದರ ಜೊತೆ ಕಾರ್ಯದರ್ಶಿಯಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿರುವುದು ಮಾತ್ರವಲ್ಲದೆ ಬಿಲ್ಲವರ ಎಸೋಸಿಯೇಶನ್ ಮುಂಬಯಿ ಇದರ ಸಮಿತಿಯ ಚುನಾವಣೆಯಲ್ಲಿ ಭರ್ಜರಿ ವಿಜಯ ಪಡೆದು ಸಮಿತಿ ಸದಸ್ಯರಾಗಿ ಪುನರಾಯ್ಕೆಗೊಂಡು ಅದರ ಸಾಂಸ್ಕೃತಿಕ ಉಪಸಮಿತಿ ಕಾರ್ಯದರ್ಶಿಯಿಂದ ಕಾರ್ಯಾಧ್ಯಕ್ಷರಾಗಿ ಭಡ್ತಿ ಪಡೆದದ್ದು ಇವರದು ದೊಡ್ಡ ಸಾಧನೆ.

ಕಲಾ ಸೇವೆ ಸಮಾಜ ಸೇವೆಯನ್ನು ನಿಸ್ವಾರ್ಥವಾಗಿ ಮಾಡುವ ಇವರು ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯ ಮಾಡಿದ ಹಿರಿಯರನ್ನು ಕಿರಿಯರನ್ನು ಗುರುತಿಸಿ ಮತ್ತು ಯಕ್ಷಗಾನ ನಾಟಕದ ಕಲಾವಿದರನ್ನು ಸರಿಸುಮಾರು 250 ಕ್ಕೂ ಹೆಚ್ಚು ಸಮಾಜ ಸೇವಕರನ್ನು ಗುರುತಿಸಿ ಸನ್ಮಾನಿಸಿದವರು ನವೀನ್ ಪಡು ಇನ್ನಾರವರು.
ಇವರು ಹೆಸರಿಗಾಗಿ ಕೆಲಸ ಮಾಡಿದವರು ಅಲ್ಲ ಆದರೆ ಇವರ ಕೆಲಸವನ್ನು ಕಂಡ ಸಮಾಜವೇ ಇವರನ್ನು ಗುರುತಿಸಿದೆ. ಕಾರಣ ಇವರ ಸಾಧನೆ ಅಂತದ್ದು. ಇವರ ಈ ಸಾಧನೆಗೆ 2018-19ನೇ ಸಾಲಿನ “ಆರ್ಯ ಭಟ” ಪ್ರಶಸ್ತಿ, ಇವರು ಕಲಿತ ಯಂ. ವಿ. ಶಾಸ್ತ್ರಿ ಶಾಲೆಯಲ್ಲಿ “ಯುವರತ್ನ ಪ್ರಶಸ್ತಿ”, ಮಾತ್ರವಲ್ಲದೆ ಚತುರ ಸಂಘಟಕ, ನಿಸ್ವಾರ್ಥ ಸಮಾಜ ಸೇವಕ, ಹಲವಾರು ಬಿರುದುಗಳ ಜೊತೆ ಸರಿಸುಮಾರು 30 ಕ್ಕಿಂತಲೂ ಹೆಚ್ಚು ಸನ್ಮಾನ ಪುರಸ್ಕಾರವನ್ನು ಇವರು ಪಡೆದು ಸಮಾಜದಲ್ಲಿ ಗುರುತಿಸಿಕೊಂಡು ಕಲಾ ರತ್ನ ಪ್ರಶಸ್ತಿ ಪಡೆದಿದ್ದಾರೆ.
ಇವರು ಬೆಳೆಯುವುದರ ಜೊತೆಗೆ ಇತರರನ್ನು ಬೆಳೆಸುವ ದೊಡ್ಡ ಗುಣವನ್ನು ಹೊಂದಿದವರು ಅದಕ್ಕಾಗಿ ಯೆ ಯಂಗ್ ಫ್ರೆಂಡ್ಸ್ ಮತ್ತು ಕಮಲಾ ಕಲಾ ವೇದಿಕೆಯ ಮೂಲಕ ಮುಂಬೈಯಲ್ಲಿ ಹಲವಾರು ಕಲಾವಿದರಿಗೆ ಸಮಾಜ ಸೇವಾಕರಿಗೆ ಕಲಾ ಪೋಷಕರಿಗೆ ಸರಿಸುಮಾರು 400 ಕ್ಕೂ ಹೆಚ್ಚು ಜನರಿಗೆ ಸನ್ಮಾನ ಮಾಡಿದ ಕೀರ್ತಿ ಇವರದು.

ಅದರಲ್ಲಿ ಮುಖ್ಯವಾಗಿ ಕಣ್ಣು ಕಿವಿ ಬಾಯಿ ಬಾರದ ವಿನೋದ ಪೂಜಾರಿ, ದಿಟ್ಟ ಮಹಿಳೆ ವಾರಿಜಕ್ಕ, ವಿಶೇಷ ಚೇತನರಾಗಿ ಸಾಹಿತ್ಯ ಕ್ಷೇತ್ರದಲ್ಲಿ ಹಲವಾರು ಸಾಧನೆ ಮಾಡಿ ಪ್ರಶಸ್ತಿ ಪಡೆದ ಸುಶಾಂತ್ ಪೂಜಾರಿ ಕನ್ನಡಿಕಟ್ಟೆ ಅವರನ್ನು ಮುಂಬೈಗೆ ಕರೆದು ಸನ್ಮಾನಿಸಿ ಅವರ ಸಾಧನೆಗೆ ಮುನ್ನುಡಿ ಬರೆದವರು ನವೀನ್ ಪಡು ಇನ್ನಾರವರು.

ಬಿಲ್ಲವರ ಎಸೋಸಿಯೇಶನ್ ಸಂಸ್ಥೆಯಲ್ಲಿ ಸಾಂಸ್ಕೃತಿಕ ಉಪಸಮಿತಿಯ ಕಾರ್ಯದರ್ಶಿ ಮತ್ತು ಕಾರ್ಯಾಧ್ಯಕ್ಷ ಆದ ನಂತರ ಯಶಸ್ವಿ ಯಕ್ಷಗಾನ ಪ್ರಯೋಗ, ಶನಿಪೂಜೆ, ತಾಳಮದ್ದಳೆ, ನಾಟಕ ಮುಂತಾದ ಹಲವು ಕಾರ್ಯಕ್ರಮಗಳನ್ನು ಮಾಡಿರುವರು. ಇವರ ಕಾರ್ಯಾವಧಿಯಲ್ಲಿ ಯಕ್ಷಗಾನ ಸಂಭ್ರಮ, ಯಕ್ಷಗಾನ ಅಷ್ಟಕ, ಯಕ್ಷಗಾನ ನವಮಿ, ಯಕ್ಷದಶಮಿ ಕಾರ್ಯಕ್ರಮ ಮಾಡಿರುವರು. ಇವರು ತನ್ನ ಉದ್ಯಮದ ಒಟ್ಟಿಗೆ ಎಷ್ಟೋ ಸಂಘಟನೆ ಮಾಡಲು ಎಷ್ಟೋ ಕಷ್ಟ ಆದರೂ ಇವರು ಛಲವನ್ನು ಬಿಡಲಿಲ್ಲ. ಇವರ ಸಮಾಜ ಸೇವೆಗೆ ಸದಾ ಬೆನ್ನೆಲುಬಾಗಿ ಕೈ ಜೋಡಿಸಿ ಸಹಕರಿಸುವ ಇವರ ಧರ್ಮಪತ್ನಿ ಶ್ರೀಮತಿ ಜ್ಯೋತಿ ಮತ್ತು ಪುತ್ರರಾದ ಅದ್ವಿಕ್ ಮತ್ತು ಆದ್ಯಾಂತ್ ರೊಂದಿಗೆ ಸುಖ ಸಂಸಾರ ಇವರದು. ಸಮಾಜದಲ್ಲಿ ಇನ್ನೂ ಹೆಚ್ಚು-ಹೆಚ್ಚು ಹೆಸರು ಬಿರುದು, ಪ್ರಶಸ್ತಿಗಳು ಇವರಿಗೆ ಒಲಿಯಲಿ.

ವೇದಿಕೆಯಲ್ಲಿ ಕರ್ನಾಟಕ ಸರಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್, ಶಾಸಕರಾದ ಯಶಪಾಲ್ ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ಕಾರ್ಕಳ ಕಾಂಗ್ರೆಸ್ ನಾಯಕ ಮುನಿಯಾಲ್ ಉದಯಕುಮಾರ್ ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.