ಮಿಯ್ಯಾರು:ಒಂದು ವರ್ಷದ ಹಿಂದೆ ಉದ್ಘಾಟಿಸಿದ್ದ ಫ್ಲಡ್ ಲೈಟ್ ಮಾಯ!
ಮಿಯ್ಯಾರು:ಮಿಯ್ಯಾರು ಗ್ರಾಮ ಪಂಚಾಯತು ವ್ಯಾಪ್ತಿಯ ಕಜೆ ಎಂಬಲ್ಲಿ ಆಟದ ಮೈದಾನ ಬಳಿ ಅಳವಡಿಸಲಾಗಿದ್ದ ಸುಮಾರು 30ದೊಡ್ಡ ಲೈಟ್ಗಳನ್ನು ಜನವರಿ 30 ಮಂಗಳವಾರ ಬೆಳಗ್ಗಿನ ಹೊತ್ತಿನಲ್ಲಿ ಕಿತ್ತು ತೆಗೆದು ಅಲ್ಲಿನ ನಿವಾಸಿ ಗಳಿಗೆ ತೊಂದರೆ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಿಯ್ಯಾರು ಗ್ರಾಮ ಪಂಚಾಯತು ವ್ಯಾಪ್ತಿಯ ಕಜೆ ಮೈದಾನಕ್ಕೆ2023ನೇ ಸಾಲಿನ ಜನವರಿ ತಿಂಗಳಲ್ಲಿ ಅಮೃತ ಮಹೋತ್ಸವ ಯೋಜನೆಯಲ್ಲಿ ರೂ 25ಲಕ್ಷ ಮಂಜೂರುಗೊಂಡಿತ್ತು.
ಇಲ್ಲಿರುವ 2 ಮೈದಾನದಲ್ಲಿ ಅಲ್ಲಿನ ಯುವಕರು ಪ್ರತೀ ನಿತ್ಯ ಶಟ್ಲ್ ಹಾಗೂ ವಾಲಿಬಾಲ್ ಆಟವಾಡುತ್ತಿದ್ದರು.ಇವರ ಮನವಿಗೆ ಸ್ಪಂದಿಸಿದ ಆಗಿನ ಗ್ರಾಮ ಪಂಚಾಯತು ಅಧ್ಯಕ್ಷರು ಸುಮಾರು ರೂ 3.5 ಲಕ್ಷ ವೆಚ್ಚದಲ್ಲಿ ಈ ಮೈದಾನಕ್ಕೆ 10 ಕಂಬಗಳಲ್ಲಿ 30 ಫ್ಲಡ್ ಲೈಟ್ಗಳನ್ನು ಅಳವಡಿಕೆ ಮಾಡಿದ್ದರು. 2023ನೇ ಮಾರ್ಚ್ ತಿಂಗಳ ಸಾಲಿನಲ್ಲಿ ಮಿಯ್ಯಾರು ಗ್ರಾಮ ಪಂಚಾಯತಿನಲ್ಲಿ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನೆ ಸಂದರ್ಭದಲ್ಲಿ ಆಗಿನ ಸಚಿವರಿಂದಲೇ ಗ್ರಾಮ ಪಂಚಾಯತು ಅಧ್ಯಕ್ಷರು ಹಾಗೂ ಸದಸ್ಯರು ಉದ್ಘಾಟನೆ ಮಾಡಿಸಿದ್ದರು.
2023ನೇ ಸಾಲಿನಲ್ಲಿ ಅನುಷ್ಠಾನ ಮಾಡಿದರು-2024ನೇ ಸಾಲಿನಲ್ಲಿ ಕಿತ್ತು ತೆಗೆದರು: ಆಡಳಿತಶಾಹಿಯ ಉತ್ತೇಜನ ಮತ್ತು ದಬ್ಬಾಳಿಕೆಗೆ ಪೂರಕ ಎನ್ನುವಂತೆ 2024ನೇ ಸಾಲಿನ ಜನವರಿ 30ರಂದು ಬೆಳಿಗ್ಗೆ ಈ ಎಲ್ಲಾ 30 ಫ್ಲಡ್ ಲೈಟ್ಗಳನ್ನು ಕಿತ್ತು ತೆಗೆಯಲಾಗಿದೆ. ಜನವರಿ 30 ಮಂಗಳವಾರ ಮುಂಜಾನೆ ಹೊತ್ತಿನಲ್ಲಿ ಈ ಫ್ಲಡ್ ಲೈಟ್ಗಳನ್ನು ತೆಗೆಯುವ ಸಂದರ್ಭದಲ್ಲಿ ಇದೊಂದು ಕಳ್ಳತನ ಪ್ರಕ್ರಿಯೆ ಎಂದು ತಿಳಿದು ಸ್ಥಳಿಯರು ಅಲ್ಲಿಗೆ ಬಂದಿದ್ದಾರೆ. ಆದರೆ ಫ್ಲಡ್ ಲೈಟ್ ತೆಗೆದ ಬಗ್ಗೆ ಯಾವುದೇ ಮಾಹಿತಿ ತಿಳಿಯದಂತಾಗಿ ಪತ್ರಿಕೆಗಳ ಗಮನಕ್ಕೆ ತಂದಿದ್ದಾರೆ.
ಅಮೃತ ಯೋಜನೆಗಳ ಕಾಮಗಾರಿಗೆ ಅನುದಾನ ಇಲ್ಲ: 2023ನೇ ಸಾಲಿನಲ್ಲಿ ಮಿಯ್ಯಾರಿಗೆ ಮಂಜೂರಾದ ಅಮೃತ ಯೋಜನೆ ಕಾಮಗಾರಿಗೆ ಅನುದಾನವೇ ಮಂಜೂರಾಗಿಲ್ಲ ಎಂದು ತಿಳಿದು ಬಂದಿದೆ. ಚುನಾವಣೆ ಮೊದಲು ಜನರನ್ನು ಮರುಳು ಮಾಡುವ ನಿಟ್ಟಿನಲ್ಲಿ ಈ ಫ್ಲಡ್ ಲೈಟ್ಗಳನ್ನು ಅಳವಡಿಸಲಾಗಿತ್ತು. ಆದರೆ ಇಂದಿನವರೆಗೂ ಅನುದಾನ ಬಾರದೆ ಇದ್ದುದರಿಂದ ಇದನ್ನು ತೆಗೆದು ಕೊಂಡೊಯ್ಯಲಾಗಿದೆ ಎಂದು ಈ ವಿಚಾರ ಬಲ್ಲ ಸ್ಥಳೀಯ ವೈಕ್ತಿಯೋರ್ವರು ತಿಳಿಸಿದ್ದಾರೆ.
ಇನ್ನಷ್ಟು ಕಾಮಗಾರಿ ಗೊಂದಲ-ಬೇಧಿಸುವಂತೆ ಪತ್ರಕರ್ತರಲ್ಲಿ ಮನವಿ
ಚುನಾವಣೆಗೆ ಮೊದಲು ಆಶ್ವಾಸನೆಗಳನ್ನು ಕೊಡುವುದು ಸಹಜ. ಯಾವುದೇ ಪಕ್ಷ ಇರಲಿ. ಆಶ್ವಾಸನೆ ನೀಡಿಯೇ ನೀಡುತ್ತದೆ. ಆದರೆ ಅಳವಡಿಸಲಾಗಿದ್ದ ಫ್ಲಡ್ ಲೈಟ್ಗಳನ್ನು ಕಿತ್ತೊಯ್ದ ಕೃತ್ಯ ಮಾತ್ರ ಅಮಾಯಕ ಜನರಿಗೆ ಮೋಸ ಮಾಡುವ ಕಾರ್ಯ ಎಂಬಂತೆ ಪರಿಗಣಿಸಲಾಗಿದೆ. ಫ್ಲಡ್ ಲೈಟ್ಗಳಿಗೆ ಅನುದಾನ ಇಲ್ಲ ಎಂದು ಅದನ್ನು ಕಿತ್ತು ತೆಗೆದರು. ಫ್ಲಡ್ ಲೈಟ್ ಬದಲಾಗಿ ರಸ್ತೆಯ ಡಾಮಾರು ಅಥವಾ ಮೋರಿ ಇದ್ದಲ್ಲಿ ಏನು ಮಾಡುತ್ತಿದ್ದರು. ಅದನ್ನು ಕೂಡಾ ಕಿತ್ತು ತೆಗೆಯುತ್ತಿದ್ದರೇ ಎಂದು ಸ್ಥಳೀಯರು ವ್ಯಂಗ್ಯವಾಡತೊಡಗಿದ್ದಾರೆ.
ಈ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಇನ್ನಷ್ಟು ಇಂತಹ ಘಟನೆಗಳು ನಡೆದಿರುವ ಬಗ್ಗೆ ಸ್ಥಳೀಯರು ಪತ್ರಕರ್ತರಲ್ಲಿ ಮನವಿ ಮಾಡಿದ್ದಾರೆ.