ಭಾರತದ ಪ್ರಗತಿಗೆಜ್ಞಾನಸುಧಾದಂತಹ ಶಿಕ್ಷಣ ಸಂಸ್ಥೆ ಪ್ರೇರಕ ಶಕ್ತಿ : ಟಿ ಸುಧಾಕರ ಪೈ
ಒಂದೇ ವರ್ಷದಲ್ಲಿದೇಶಕ್ಕೆ 227 ವೈದ್ಯರನ್ನು ನೀಡಿದ ಹೆಮ್ಮೆಯ ಸಂಸ್ಥೆ ಜ್ಞಾನಸುಧಾ : ಕೋಟ ಶ್ರೀನಿವಾಸ ಪೂಜಾರಿ
ಭಾರತವು ಮಾಹಿತಿತಂತ್ರಜ್ಞಾನಕ್ಷೇತ್ರದಲ್ಲಿ ಈಗಾಗಲೆ ಮುಂಚೂಣಿಯಲ್ಲಿದೆ. ಜ್ಞಾನಸುಧಾದಂತಹ ಸಂಸ್ಥೆಗಳು ಈ ರೀತಿಯಉತ್ತಮ ಸಾಧನೆಯನ್ನು ಮಾಡುತ್ತಿರುವುದರಿಂದಎಲ್ಲಾ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಸರ್ವತೋಮುಖಅಭಿವೃದ್ಧಿಯನ್ನು ಸಾಧಿಸುವುದರಲ್ಲಿ ಸಂಶಯವಿಲ್ಲ. ನಾವು ಮಾಡುವ ಕೆಲಸದಅರಿವಿರಲಿ ಮತ್ತುಅದನ್ನು ಸಂತೋಷದಿಂದ ಮಾಡಬೇಕು ಆಗ ಎಲ್ಲ ಸಾಧನೆಯು ಸುಲಭ ಸಾಧ್ಯವಾಗುವುದು ಎಂದು ಟಿ ಸುಧಾಕರ ಪೈಯವರು ಹೇಳಿದರು.
ಇವರು ಮಣಿಪಾಲದ ವಿದ್ಯಾನಗರ ಗ್ರೀನ್ಸ್ ನಲ್ಲಿಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಆಯೋಜಿಸಿರುವ ಜ್ಞಾನಸುಧಾ ಸಂಸ್ಥಾಪಕರ ದಿನಾಚರಣೆಯ ಎರಡನೇ ಹಂತದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಸಮರ್ಥ, ಶಕ್ತಿಶಾಲಿ ದೇಶ ನಿರ್ಮಾಣವಾಗುತ್ತಿರುವುದು ಭಾರತೀಯರಾದ ನಮಗೆ ಅಭಿಮಾನದ ವಿಷಯ. ಅಂದು ದೇಶದ ಸಾಲಕ್ಕಾಗಿ ಚಿನ್ನವನ್ನುಅಡವಿಟ್ಟ ಭಾರತ ಇಂದು ಜಗತ್ತಿನ 70 ರಾಷ್ಟ್ರಗಳಿಗೆ ಸಾಲ ನೀಡುವ ದೇಶವಾಗಿ ಬೆಳೆದು ನಿಂತಿದೆ. ಅದರಂತೆ ಒಂದೇ ವರ್ಷದಲ್ಲಿ ದೇಶಕ್ಕೆ 227 ವೈದ್ಯರನ್ನು ನೀಡಿದ ಹೆಮ್ಮೆಯ ಸಂಸ್ಥೆ ಜ್ಞಾನಸುಧಾ. ಹೆತ್ತವರ ಮತ್ತು ದೇಶದ ಕನಸನ್ನು ನನಸು ಮಾಡುವ ಹೆಮ್ಮೆಯ ಸಂಸ್ಥೆಯಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ವಿಧಾನಸಭೆಯ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಶಿಕ್ಷಣ ಕಾಶಿ ಎಂಬ ಹೆಸರು ಪಡೆದ ಉಡುಪಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸವನ್ನು ಜ್ಞಾನಸುಧಾ ಮಾಡುತ್ತಿದೆ. ವಿದ್ಯಾರ್ಥಿಗಳ ಔದ್ಯೋಗಿಕ ಕ್ಷೇತ್ರಕ್ಕೆ ಸೇರುವ ಕನಸನ್ನು ನನಸು ಮಾಡುವ ಕೆಲಸ ಮಾಡುತ್ತಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಆದರ್ಶ ಆಸ್ಪತ್ರೆ ಉಡುಪಿ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಜಿ.ಎಸ್. ಚಂದ್ರಶೇಖರ್ ಮಾತನಾಡಿ ಜ್ಞಾನಸುಧಾ ಹೇಳಿದ್ದನ್ನು ಸಾಧಿಸಿ ತೋರಿಸಿದ ಸಂಸ್ಥೆ. ಇಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರ, ದೇಶಭಕ್ತಿ, ಹೆತ್ತವರಿಗೆ ಗೌರವ ನೀಡುವ ಮೌಲ್ಯಭರಿತ ಶಿಕ್ಷಣ ನೀಡುವ ಸಂಸ್ಥೆಯಾಗಿದೆ. ಜ್ಞಾನಸುಧಾ ಈಗ ನಾಲ್ಕು ಸಂಸ್ಥೆಗಳಾಗಿ ಬೆಳೆಯುತ್ತಿರುವುದನ್ನು ನೋಡಿದರೆ ಅದರ ಕಾರ್ಯವೇಗದ ಅರಿವಾಗುವುದು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆನರಾ ಕನ್ಸ್ಯುಮರ್ ಪ್ರಾಡಕ್ಟ್ಸ್ ನ ನಿರ್ದೇಶ ಜಯಾ ಸುಧಾಕರ ಪೈ, ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಇನ್ನೂ ಹೆಚ್ಚಿನ ಅಭೂತಪೂರ್ವ ಸಾಧನೆಯನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು.
ಇತ್ತೀಚೆಗೆ ದೈವಾಧೀನರಾದ ನಿಟ್ಟೆ ಯುನಿವರ್ಸಿಟಿಯ ಚಾನ್ಸಲರ್ ಎನ್ ವಿನಯ್ ಹೆಗ್ಡೆ ಅವರಿಗೆ ನುಡಿ ನಮನ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿಉಡುಪಿ ಮತ್ತು ಮಣಿಪಾಲ ಜ್ಞಾನಸುಧಾದಿಂದ ನೀಟ್-2025ರ ಮೂಲಕ ಎಂಬಿಬಿಎಸ್ಗೆ ಸೇರ್ಪಡೆಯಾದ 56 ವಿದ್ಯಾರ್ಥಿಗಳ ಪರವಾಗಿ ಒಂದು ಲಕ್ಷದ ಹನ್ನೆರಡು ಸಾವಿರ ರುಪಾಯಿ ಚೆಕ್ಕನ್ನು ಭಾರತೀಯ ಸೇನೆಗೆ (ನ್ಯಾಷನಲ್ಡಿಫೆನ್ಸ್ ಫಂಡ್) ಹಸ್ತಾಂತರಿಸಲಾಯಿತು.
ಮಣಿಪಾಲ ಹಾಗೂ ಉಡುಪಿ ಜ್ಞಾನಸುಧಾ ಸಾಧಕ ವಿದ್ಯಾರ್ಥಿಗಳಿಗೆ 4.90ಲಕ್ಷ ರುಪಾಯಿವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಳೆದ ಡಿಸೆಂಬರ್ 28 ರಂದು ಕಾರ್ಕಳ ಜ್ಞಾನಸುಧಾದಲ್ಲಿ ನಡೆದ ಮೊದಲ ಹಂತದ ಪ್ರತಿಭಾ ಪುರಸ್ಕಾರದಲ್ಲಿ 13.05ಲಕ್ಷ ರೂಪಾಯಿ ವಿದ್ಯಾರ್ಥಿವೇತನ, ಕಾರ್ಕಳ ಜ್ಞಾನಸುಧಾದಿಂದ ನೀಟ್-2025ರ ಮೂಲಕ ಎಂಬಿಬಿಎಸ್ಗೆ ಸೇರ್ಪಡೆಯಾದ 171 ವಿದ್ಯಾರ್ಥಿಗಳ ಪರವಾಗಿ ರುಪಾಯಿ 3.42 ಲಕ್ಷದ ಚೆಕ್ಕನ್ನು ಭಾರತೀಯ ಸೇನೆಗೆ (ನ್ಯಾಷನಲ್ಡಿಫೆನ್ಸ್ ಫಂಡ್)ವಿತರಿಸಲಾಗಿತ್ತು.
ಈ ಸಂದರ್ಭದಲ್ಲಿ ಎಂ.ಬಿ.ಬಿ.ಎಸ್.ಗೆ ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು, ಜೆ.ಇ.ಇ. ಮೈನ್ ಮೂಲಕ ಎನ್.ಐ.ಟಿ. ಪ್ರವೇಶ ಪಡೆದ ವಿದ್ಯಾರ್ಥಿಗಳನ್ನು, ಕೆ.ಸಿ.ಇ.ಟಿ ಇಂಜಿನಿಯರಿಂಗ್ ನಲ್ಲಿ 1 ಸಾವಿರದೊಳಗಿನ ರ್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು, ರಾಷ್ಟ್ರಮಟ್ಟದ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ, ಎನ್ ಡಿ ಎ ತೇರ್ಗಡೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ಶಮಿತಾ ನಿರೂಪಿಸಿ, ವಂದಿಸಿದರು.










